ರಾಮನಗರ : ಚಾರಣಕ್ಕೆ ಹೋಗಿದ್ದ ಆರು ಜನ ಯುವತಿಯರು ವಾಪಸ್ ಬರುವಾಗ ದಾರಿ ತಪ್ಪಿ ಕಾಡಿನಲ್ಲಿ ಅಲೆದಾಡಿ, ದಿಕ್ಕು ತೋಚದೆ ಕೊನೆಗೆ 112 ಸಹಾಯದ ಮೂಲಕ ಊರು ಸೇರಿದ ಘಟನೆ ರಾಮನಗರದಲ್ಲಿ ನಡೆದಿದೆ.
ಬೆಂಗಳೂರಿನಿಂದ ರಾಮನಗರದ ಹಂದಿಗೊಂದಿ ಬೆಟ್ಟಕ್ಕೆ ಚಾರಣಕ್ಕಾಗಿ ಬಂದಿದ್ದ ಆರು ಜನ ಹುಡುಗಿಯರು. ಚಾರಣ ಮುಗಿಸಿ ವಾಪಸ್ ಹೋಗುವಾಗ ಕಾಡಿನ ಮಧ್ಯೆ ದಾರಿ ತಪ್ಪಿದ್ದಾರೆ. ಹೊರಹೋಗಲು ದಾರಿ ಸಿಗದೆ ಕಾಡಿನಲ್ಲಿ ಅಲೆದಾಡಿದ್ದಾರೆ. ಕೊನೆಗೆ ತುರ್ತು ಸಂಖ್ಯೆ 112ಗೆ ಕರೆ ಮಾಡಿ ದಾರಿ ತಪ್ಪಿದ ಬಗ್ಗೆ ಪೊಲೀಸರಿಗೆ ಹುಡುಗಿರು ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾಗಿ ಹುಡುಗಿರು ನೀಡಿದ ಮಾಹಿತಿಯ ಜಾಡು ಹಿಡಿದು ಹೊರಟ ರಾಮನಗರ ಐನೂರು ಪೊಲೀಸರು, ಹುಡುಗಿಯರ ರಕ್ಷಣೆಗೆ ಮುಂದಾದರು. ಬಸವನಪುರ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಿದ ಪೊಲೀಸರು ರಾತ್ರಿ ಸುಮಾರು 9 ಗಂಟೆಗೆ ಹುಡುಗಿಯರನ್ನು ಪತ್ತೆ ಮಾಡಿದರು. ದಾರಿ ತಪ್ಪಿದ್ದ ಹುಡುಗಿಯರ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟರು.
ರಾಮನಗರ ವ್ಯಾಪ್ತಿ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ ಇಂಥ ಪರಿಸ್ಥಿತಿಯಲ್ಲಿ ಯುವತಿಯರು ದಾರಿ ತಪ್ಪಿದ್ದು ಪೊಲೀಸರಿಗೆ ಹೆಚ್ಚಿನ ತಲೆನೋವಾಗಿ ಪರಿಣಮಿಸಿದೆ. ಕೊನೆಗೆ ಗ್ರಾಮಸ್ಥರ ಸಹಾಯದಿಂದ ಹುಡುಗಿಯರನ್ನು ಹುಡುಕಿದ ಪೊಲೀಸರು, ಸುರಕ್ಷಿತವಾಗಿ ಬೆಂಗಳೂರಿಗೆ ಕಳಿಸಿಕೊಟ್ಟ ಬಳಿಕವೇ ನಿಟ್ಟುಸಿರು ಬಿಟ್ಟಿದ್ದಾರೆ.





