ಬೆಂಗಳೂರು: ಪ್ರತೀ ಸೀಸನ್ ನಂತೆಯೇ ಈ ಬಾರಿಯೂ ಕೂಡಾ ಆರ್ಸಿಬಿ ತನ್ನ ಗ್ರೀನ್ ಜೆರ್ಸಿ ಪಂದ್ಯ ಆಡಲು ಮುಂದಾಗಿದೆ. ನಾಳೆ (ಏ.೨೧) ಕೊಲ್ಕತ್ತಾ ವಿರುದ್ಧ ಆರ್ಸಿಬಿ ಈ ಸೀಸನ್ನ ತನ್ನ 8ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡ ತನ್ನ ಸಂಪ್ರದಾಯದಂತೆ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.
ಸ್ವಚ್ಛತೆ, ಪರಿಸರ ಜಾಗೃತಿ ವಿಚಾರವಾಗಿ ಅಭಿಮಾನಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ಸೀಸನ್ ನಲ್ಲಿ ಆರ್ಸಿಬಿ ಒಂದು ಪಂದ್ಯವನ್ನು ಹಸಿರು ಬಣ್ಣದ ಜೆರ್ಸಿ ತೊಟ್ಟು ಪಂದ್ಯ ಆಡುವ ಮೂಲಕ ಪರಿಸರ ಕಾಳಜಿ ಬಗ್ಗೆ ಪ್ರಚಾರ ಮಾಡಲಿದೆ.
https://x.com/RCBTweets/status/1781628578154848612
ಕಳೆದ ಬಾರಿ ಆರ್ಸಿಬಿ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ವೇಳೆ, ಮೂರು ಕೆರೆಗಳ ಪುನರುಜ್ಜೀನವಗೊಳಿಸುವುದಾಗಿ ಹೇಳಿತ್ತು, ಅದರಂತೆ ಈಗ ಮೂರು ಕೆರೆಗಳ ಕೆಲಸವನ್ನು ವರ್ಷದೊಳಗೆ ಪೂರ್ಣಗೊಳಿಸಿದ್ದು, ಈ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಂಡಿಯಾ ಕೇರ್ಸ್ ಫೌಂಡೇಶನ್ ವರದಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣ್ಣೂರು ಕೆರೆಗೆ ಮೂಲಸೌಕರ್ಯಗಳನ್ನು ಒದಗಿಸಿದೆ. ಇಟ್ಗಲ್ಪುರ ಕೆರೆ ಜೊತೆಗೆ ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಈ ಕೆರೆಗಳ ಹೂಳೆತ್ತುವ ಕಾರ್ಯ ನಡೆಸಲಾಗಿದ್ದು, ಅದರಿಂದ ಸುಮಾರು 17 ಎಕೆರೆಗಳಷ್ಟು ನೀರನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಈ ಕೆರೆಗಳು ಹೊಂದಿವೆ.
ಕಣ್ಣೂರು ಕೆರೆ ಸುತ್ತಲೂ ಔಷಧೀಯ ಸಸ್ಯಗಳ ಉದ್ಯಾನವನ ಮತ್ತು ಚಿಟ್ಟೆ ಪಾರ್ಕ್ ನಿರ್ಮಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಆರ್ಸಿಬಿ ತನ್ನ ವಿನೂತನ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಸದಾ ಗೆಲ್ಲುತ್ತಿದೆ.
ಇನ್ನು ಈ ಟೂರ್ನಿಯಲ್ಲಿ ಈವರೆಗೆ 7 ಪಂದ್ಯಗಳನ್ನಾಡಿರುವ ಆರ್ಸಿಬಿ ಕೇವಲ ಒಂದರಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಳೆ ಕೆಕೆಆರ್ ವಿರುದ್ಧ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಸೋತಲ್ಲಿ ಭಾಗಶಃ ಟೂರ್ನಿಯಿಂದಲೇ ಹೊರ ಬೀಳುವ ಸಾಧ್ಯತೆಗಳಿವೆ.





