ನಾಗ್ಪುರ: ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಯಲ್ಲಿ ವಿದರ್ಭ ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ನಾಗ್ಪುರ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕೇರಳ ಮತ್ತು ವಿದರ್ಭ ನಡುವಣ ಫೈನಲ್ಸ್ ಪಂದ್ಯದಲ್ಲಿ ಡ್ರಾ ಸಾಧಸಿದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಕಾರಣ ವಿದರ್ಭ ಚಾಂಪಿಯನ್ ಆಗಿದೆ.
ರಣಜಿ ಕ್ರಿಕೆಟ್ನಲ್ಲಿ ಇದೆ ಮೊದಲ ಬಾರಿಗೆ ಫೈನಲ್ಸ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕೇರಳದ ಕನಸು ನುಚ್ಚುನೂರಾಗಿದೆ.
ಟಾಸ್ ಗೆದ್ದ ಕೇರಳ ತಂಡ ಬೌಲಿಂಗ್ ಆಯ್ಕೆ ಮಾಡಿ, ವಿರೋಧ ತಂಡ ವಿದರ್ಭವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ವಿದರ್ಭ ತಂಡ ಮೊದಲ ಇನ್ನಿಂಗ್ಸ್ನಲ್ಲಿ 379 ರನ್ ಕಲೆಹಾಕಿ ಸರ್ವಪತನ ಕಂಡಿತ್ತು. ನಂತರ ಕೇರಳ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 342 ರನ್ಗಳಿಗೆ ಆಲೌಟ್ ಆಗುವ ಮೂಲಕ 37 ರನ್ ಹಿನ್ನಡೆ ಅನುಭವಿಸಿತ್ತು.
ವಿದರ್ಭ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 375 ರನ್ ಗಳಿಸಿತು. ಈ ಸಂದರ್ಭದಲ್ಲಿ ಫಲಿತಾಂಶ ದೊರಕದ ಹಿನ್ನಲೆಯಲ್ಲಿ ಡ್ರಾ ಎಂದು ಘೋಷಣೆ ಮಾಡಿದರು. ಈ ವೇಳೆ ಮೊದಲ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡ ವಿದರ್ಭವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಇದರೊಂದಿಗೆ ಚೊಚ್ಚಲ ಟ್ರೋಫಿ ಕನಸು ಕಂಡಿದ್ದ ಕೇರಳಕ್ಕೆ ನಿರಾಸೆ ಉಂಟಾಯಿತು.
ಈ ಹಿಂದೆ ವಿದರ್ಭ ತಂಡ 2017-18 ಮತ್ತು 2018-19 ರಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.