ಹರಿಯಾಣ: ನಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ, ಅದು ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಸತ್ಯ ಜಯಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
ಪ್ಯಾರಿಸ್ನಿಂದ ನಿನ್ನೆ ದೆಹಲಿಗೆ ಮರಳಿದ ವಿನೇಶ್ ಫೋಗಟ್ ಅವರನ್ನು ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಹರಿಯಾಣದ ಅವರ ತವರೂರು ಬಲಾಲಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು.
ಬಳಿಕ ತಮ್ಮ ತವರು ಬಲಾಲಿಯಲ್ಲಿ ನೂರಾರು ಗ್ರಾಮಸ್ಥರು ಸೇರಿದ್ದ ಅದ್ಧೂರಿ ಸಮಾರಂಭದಲ್ಲಿ ವಿನೇಶ್ ಫೋಗಟ್ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿನೇಶ್ ಫೋಗಟ್ ಅವರು, ನನ್ನ ದೇಶವಾಸಿಗಳು, ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರಿಂದ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗ ಆಗಿರುವ ಗಾಯ ಬೇಗನೇ ವಾಸಿಯಾಗುವ ಭರವಸೆ ಮೂಡಿದೆ. ಇದರಿಂದ ನಾನು ಕುಸ್ತಿಗೆ ಮರಳಲೂ ಬಹುದು ಎಂದರು.
ಈ ರೀತಿ ಪದಕ ಕೈತಪ್ಪಿರುವುದು ನನ್ನ ಜೀವನದ ಬಹಳ ದೊಡ್ಡ ಗಾಯವಾಗಿದೆ. ಆದರೆ ಇಂದು ಮೂಡಿರುವ ಧೈರ್ಯವನ್ನು ಸರಿಯಾದ ದಿಕ್ಕಿನಲ್ಲಿ ವಿನಿಯೋಗಿಸುತ್ತೇನೆ. ನನ್ನ ಹೋರಾಟ ಇಲ್ಲಿಗೆ ನಿಲ್ಲಲ್ಲ. ಅದು ಮುಂದುವರಿಯಲಿದೆ ಎಂದು ಹೇಳಿದರು.