ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿಯ ಏಕದಿನ ಕ್ರಿಕೆಟ್ನಲ್ಲಿ ಸತತ 4ನೇ ಜಯ ದಾಖಲಿಸುವ ಮೂಲಕ ಕರ್ನಾಟಕ ತಂಡ ತನ್ನ ಗೆಲುವಿನ ಓಟ ಮುಂದುವರೆಸಿದೆ.
ಅಹಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕ ಮಯಾಂಕ್ ಅಗರವಾಲ್ 100(45) ಅಜೇಯ ಶತಕದ ನೆರವಿನಿಂದ ಅರುಣಾಚಲ ಪ್ರದೇಶದ ವಿರುದ್ಧ ಕರ್ನಾಟಕ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಕರ್ನಾಟಕ ತಂಡ ಎದುರಾಳಿ ಅರುಣಾಚಲ ಪ್ರದೇಶ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಕರ್ನಾಟಕ ತಂಡದ ಬೌಲರ್ಗಳಾದ ವಿ ಕೌಶಿಕ್ ಹಾಗೂ ಹಾರ್ದಿಕ್ ರಾಜ್ ತಲಾ 4 ವಿಕೆಟ್ ಪಡೆದರು.
ಕರ್ನಾಟಕ ತಂಡದ ಬೌಲರ್ಗಳ ದಾಳಿಗೆ ತತ್ತರಿಸಿದ ಅರುಣಾಚಲ ಪ್ರದೇಶವು 43.2 ಓವರ್ಗಳಲ್ಲಿ 166 ರನ್ಗಳಿಗೆ ಆಲೌಟ್ ಆಯಿತು. ಆದರೆ ಅರುಣಾಚಲ ತಂಡದ ಪರವಾಗಿ ಏಕಾಂಗಿ ಹೋರಾಟ ನಡೆಸಿದ ಅಭಿನವ್ ಸಿಂಗ್ 71(100) ರನ್ಗಳಿಸಿ ನಾಟ್ ಔಟ್ ಆಗಿ ಉಳಿದರು.
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕ ಬ್ಯಾಟರ್ಗಳ ಅಬ್ಬರದಿಂದ ಕೇವಲ 14.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿ ತನ್ನ ಅಜೇಯ ಓಟ ಮುಂದುವರೆಸಿತು.
ಮಯಾಂಕ್ ಅಗರ್ವಾಲ್ 45 ಎಸೆತಗಳಲ್ಲಿ ಶತಕ ಗಳಿಸಿದರೆ, ಅಭಿನವ್ ಮನೋಹರ್ 66 ರನ್ಗಳಿಸಿ ಅಜೆಯರಾಗಿ ಉಳಿದರು. ಈ ಗೆಲುವಿನ ಮೂಲಕ ಕರ್ನಾಟಕ ತಂಡವು 16 ಅಂಕಗಳೊಂದಿಗೆ ʼಸಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.



