ಇಂದೋರ್: ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ 2024ರ ಗುಂಪು-ಬಿ ಪಂದ್ಯದಲ್ಲಿ, ತಮಿಳುನಾಡು ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈವರೆಗೆ 5 ಪಂದ್ಯವನ್ನಾಡಿ 3ರಲ್ಲಿ ಜಯಗಳಿಸಿರುವ ಕರ್ನಾಟಕ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಟಾಸ್ ಗೆದ್ದ ತಮಿಳುನಾಡು ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ತಮಿಳುನಾಡು ಬ್ಯಾಟರ್ಗಳು ಕರ್ನಾಟಕದ ವೇಗಿಗಳ ಮುಂದೆ ಆರಂಭದಲ್ಲೇ ಮುಗ್ಗರಿಸಿದ್ದಾರೆ.
ಜಗದೀಶನ್(0) ಖಾತೆ ತೆರೆಯುವ ಮುನ್ನವೇ ವಿ.ಕೌಶಿಕ್ ಇವರ ವಿಕೆಟ್ ಪಡೆದು ಆರಂಭದ ಯಶಸ್ಸನ್ನು ತಂದು ಕೊಟ್ಟರು. ನಂತರ ಇಂದ್ರಜಿತ್ (5) ರನ್ ಗಳಿಸಿ ಆಡುವ ವೇಳೆ ವಿದ್ಯಾಧರ್ ಪಟೇಲ್ ಬೌಲಿಂಗ್ನಲ್ಲಿ ಶ್ರೇಯಸ್ ಗೋಪಾಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಬಂದ ಬ್ಯಾಟರ್ಗಳು ಆರಂಭಿಕ ಆಟಗಾರರನ್ನೇ ಹಿಂಬಾಲಿಸುತ್ತಾ ಪೆವಿಲಿಯನ್ ಹಾದಿ ಹಿಡಿದರು. ಈ ಹಂತದಲ್ಲಿ ನಾಯಕ ಶಾರುಖ್ ಖಾನ್ 19 ರನ್ ಬಾರಿಸಿ ತಂಡಕ್ಕೆ ಆಸರೆಯಾಗುವ ಭರವಸೆ ನೀಡಿದ್ದರು. ಆದರೆ ಮನೋಜ್ ಭಾಂಡಗೆ ಎಸೆತ ಗುರುತಿಸುವಲ್ಲಿ ವಿಫಲರಾದ ಶಾರುಖ್ ವಿಕೆಟ್ ಒಪ್ಪಿಸಿದರು.
ಕರ್ನಾಟಕ ಬೌಲರ್ಗಳ ಯಶಸ್ವಿ ಬೌಲಿಂಗ್ನಿಂದ ತಮಿಳುನಾಡು ತಂಡ 20 ಓವರ್ಗಳಲ್ಲಿ 90 ರನ್ಗೆ ಆಲೌಟ್ ಆಯಿತು. ಕರ್ನಾಟಕ ಪರ ವಿ.ಕೌಶಿಕ್ 4 ಓವರ್ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರೆ, ಮನೋಜ್ ಭಾಂಡ ಕೂಡ 3 ವಿಕೆಟ್ ಕಬಳಿಸಿದರು.
ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ತಂಡದ ಆರಂಭಿಕ ಬ್ಯಾಟರ್ಗಳಾದ ಮನೀಶ ಪಾಂಡೆ 42 (29ಎಸೆತ), ಹಾಗೂ ಮಯಾಂಕ್ ಅಗರ್ವಾಲ್ 30 (27 ಎಸೆತ) ರನ್ ಗಳಿಸುವ ಮೂಲಕ ಕೇವಲ 11.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.





