ಮುಂಬೈ: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಏಪ್ರಿಲ್ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆಯುವ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಮುಂಬೈ ಪರವಾಗಿ ಆಡಲಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಮಾಹಿತಿ ನೀಡಿದ್ದಾರೆ.
ಗಾಯದಿಂದ ಕೆಲವು ತಿಂಗಳಿಂದ ಕ್ರಿಕೆಟ್ನಿಂದ ದೂರವಿದ್ದ ಬೂಮ್ರಾ, ಈಗ ಚುಟುಕು ಐಪಿಎಲ್ನಲ್ಲಿ ಆಡಲು ಸಜ್ಜಾಗಿದ್ದು, ಇಂದು ಅಭ್ಯಾಸವನ್ನು ನಡೆಸಿದ್ದಾರೆ ಎಂದು ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
ಬೂಮ್ರಾ ಪ್ರವೇಶದಿಂದ ತಂಡದ ಬೌಲಿಂಗ್ ವಿಭಾಗ ಗಟ್ಟಿಯಾಗಿದ್ದು, ಈಗ ತಂಡದಲ್ಲಿ ಯಾವುದೇ ಆಟಗಾರರಿಗೆ ಗಾಯದ ಆತಂಕವಿಲ್ಲ. ಮುಂದಿನ ಪಂದ್ಯಗಳಲ್ಲಿ ಎಲ್ಲಾ ವಿಭಾಗದಲ್ಲೂ ಪೂರ್ತಿ ತಂಡವಾಗಿ ಮುಂಬೈ ಕಣಕ್ಕಿಳಿಯಲಿದೆ ಎಂದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಸ್ಕಾರ್ ಸರಣಿಯ ನಂತರ ಬೆನ್ನು ನೋವಿಗೆ ತುತ್ತಾಗಿದ್ದ ಬೂಮ್ರಾ, ಬಳಿಕ ವಿಶ್ರಾಂತಿಯಲ್ಲಿದ್ದರು. ಜೊತೆಗೆ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಏಕದಿನ ಸರಣಿಯಿಂದಲೂ ಬೂಮ್ರಾ ಹೊರಗುಳಿದಿದ್ದರು.
ಮುಂಬೈ ಹಾಗೂ ಆರ್ಸಿಬಿ ನಡುವಣ ಪಂದ್ಯವು ಏ.7 ರಂದು ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.





