Mysore
20
overcast clouds
Light
Dark

IPL 2024: ತವರಿನಂಗಳದಲ್ಲಿ ಆರ್‌ಸಿಬಿಗೆ ಮೊದಲ ಸೋಲು: ಚಿನ್ನಸ್ವಾಮಿಯಲ್ಲಿ ಅಜೇಯ ಓಟ ಮುಂದುವರೆಸಿದ ಕೆಕೆಆರ್‌!

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್‌ಲೀಗ್‌ನ 10 ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಕೆಕೆಆರ್‌ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದ್ದಾರೆ. ಆ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಜೇಯ ಓಟ ಮುಂದುವರೆಸಿದ್ದಾರೆ.

2016 ರಿಂದ ಇಲ್ಲಿಯವರೆಗೆ ಇತ್ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಒಂದೇ ಒಂದು ಪಂದ್ಯವನ್ನು ಸಹಾ ಕೊಲ್ಕತ್ತಾ ಸೋತಿಲ್ಲ. ಆರ್‌ಸಿಬಿ ಮೇಲಿನ ಅಜೇಯ ಓಟ ಮುಂದುವರೆಸಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 182 ರನ್‌ ಕಲೆಹಾಕಿ 183 ರನ್‌ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕೆಕೆಆರ್‌ ತಂಡ ನಿಗದಿತ 16.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 186 ರನ್‌ ಕಲೆ ಹಾಕಿ ಗೆದ್ದು ಬೀಗಿತು.

ಆರ್‌ಸಿಬಿ ಇನ್ನಿಂಗ್ಸ್‌: ಆರ್‌ಸಿಬಿ ಪರವಾಗಿ ಆರಂಭಿಕರಾಗಿ ಬಂದ ನಾಯಕ ಫಾಫ್‌ (8) ಬೇಗನೆ ನಿರ್ಗಮಿಸಿದರು. ಬಳಿಕ ಬಂದ ಕ್ಯಾಮರೋನ್‌ ಗ್ರೀನ್‌ (33) ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌ (28) ಕೊಂಚ ಕಾಡಿದರು. ರಜತ್‌ ಪಟಿದರ್‌ (3), ಅನುಜ್‌ ರಾವತ್‌ (3), ಕೊನೆಯಲ್ಲಿ ಅಬ್ಬರಿಸಿದ ದಿನೇಶ್‌ ಕಾರ್ತಿಕ್‌ (20) ಕ್ಯಾಮಿಯೋ ನೀಡಿದರು.

ವಿರಾಟ್‌ ಇನ್ನಿಂಗ್ಸ್‌: ಇತ್ತ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡ ಆರ್‌ಸಿಬಿಗೆ ಮತ್ತೊಮ್ಮೆ ರನ್‌ ಮೆಷಿನ್‌ ಆಸರೆಯಾದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ಗಟ್ಟಿಯಾಗಿ ನಿಂತು ಇನ್ನಿಂಗ್ಸ್‌ ಕಟ್ಟಿದ ಕೊಹ್ಲಿ ಕೆಕೆಆರ್‌ ಬೌಲರ್‌ಗಳನ್ನು ಕಾಡಿದರು. ಸಂಪೂರ್ಣ ಇನ್ನಿಂಗ್ಸ್‌ ನಾಟ್‌ ಔಟ್‌ ಆದ ಕೊಹ್ಲಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 59 ಎಸೆತಗಳನ್ನು ಎದುರಿಸಿ 4 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 83 ರನ್‌ ಕಲೆಹಾಕಿದರು.

ಕೆಕೆಆರ್ ಪರ ಹರ್ಷಿತ್‌ ರಾಣಾ ಮತ್ತು ರಸೆಲ್ ಅವರು ತಲಾ ಎರಡು ವಿಕೆಟ್ ಕಬಳಿಸಿದರು. ಸುನಿಲ್ ನರೇನ್ ಒಂದು ವಿಕೆಟ್ ಪಡೆದು ಗಮನ ಸೆಳೆದರು

ಕೊಲ್ಕತ್ತಾ ಇನಿಂಗ್ಸ್: ಅರ್ಸಿಬಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭ ಪಡೆಯಿತು. ಅರಂಭಿಕರಾಗಿ ಬಂದ ಫಿಲಿಪ್ ಸಾಲ್ಟ್ (30) ಮತ್ತು ಬೌಲರ್ ಕಂ ಬ್ಯಾಟ್ಸ್‌ಮನ್‌ ಸುನೀಲ್‌ ನರೈನ್‌ 22 ಎಸೆತಗಳಲ್ಲಿ 2 ಬೌಂಡರಿ 5 ಸಿಕ್ಸರ್ ಸಹಿತ 47 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 86 ರನ್ ಗಳ ಭರ್ಜರಿ ಜೊತೆಯಾಟ ನೀಡಿದರು.

ಈ ಇಬ್ಬರು ಆರಂಭಿಕರ ನಿರ್ಗಮನದ ನಂತರ ಜೊತೆಯಾದ ಶ್ರೇಯಸ್ ಆಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಪಂದ್ಯವನ್ನು ಕೆಕೆಆರ್ ನತ್ತ ವಾಲಿಸಿದರು. ವೆಂಕಟೇಶ್‌ ಅಯ್ಯರ್‌ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ ಸೇರಿದಂತೆ 50 ರನ್‌ ಬಾರಿಸಿದರೇ, ನಾಯಕ ಶ್ರೇಯಸ್‌ ಅಯ್ಯರ್‌ ಓಟಾಗದೇ (39) ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಿಂಕು ಸಿಂಗ್‌ ಗೆಲುವಿಗೆ (5) ರನ್‌ ಕಾಣಿಕೆ ನೀಡಿದರು.