Mysore
20
overcast clouds
Light
Dark

ಶಿವಮೊಗ್ಗದ ಜನ ಬದಲಾವಣೆ ಬಯಸಿದ್ದಾರೆ: ಶಿವರಾಜ್‌ಕುಮಾರ್‌

ಶಿವಮೊಗ್ಗ: ನಟ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಕ್ಷೇತ್ರದ ವಿವಿಧ ಭಾಗಗಳಿಗೆ ತೆರಳಿ ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಟ ಶಿವರಾಜ್‌ಕುಮಾರ್‌ ಸಹ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಜತೆಗೂಡಿ ಚುನಾವಣೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿರುವ ಶಿವರಾಜ್‌ಕುಮಾರ್‌ ದಂಪತಿ ಮಾಧ್ಯಮದವರ ಜತೆ ಮಾತನಾಡಿದ್ದು, ಶಿವರಾಜ್‌ಕುಮಾರ್‌ ಶಿವಮೊಗ್ಗದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಭದ್ರಾವತಿಯಲ್ಲಿ ನಡೆದ ರ್ಯಾಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವರಾಜ್‌ಕುಮಾರ್‌ ಈ ಹಿಂದಿನ ಬಾರಿಗೆ ಹೋಲಿಸಿದರೆ ಈ ಬಾರಿ ಜನರ ಬೆಂಬಲವನ್ನು ನೋಡುತ್ತಿದ್ದರೆ ಒಂದು ಹೊಸತನವಿತ್ತು, ಆತ್ಮವಿಶ್ವಾಸವಿತ್ತು. ಜನರ ಪ್ರತಿಕ್ರಿಯೆಯನ್ನು ನೋಡಿದಾಗ ತುಂಬಾ ಪಾಸಿಟಿವ್‌ ಎನಿಸಿತು. ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಮೂಡಿತು, ಇದು ಎಷ್ಟು ಸರಿಯೋ ಗೊತ್ತಿಲ್ಲ ಎಂದರು.

ಇನ್ನೂ ಮುಂದುವರಿದು ಮಾತನಾಡಿದ ಶಿವಣ್ಣ ನಾವೇನಿದ್ದರೂ ಹೃದಯದಿಂದ ಮಾತನಾಡುವವರು, ತಲೆಯಲ್ಲಿಟ್ಟುಕೊಂಡು ಮಾತನಾಡುವವರಲ್ಲ. ಪಕ್ಷದ ತತ್ವಗಳನ್ನು ಅನುಸರಿಸುತ್ತಾ ನಾವು ಏನು ಕೆಲಸಗಳನ್ನು ಮಾಡಬೇಕು ಎಂಬುದನ್ನು ಈಗಾಗಲೇ ಗೀತಾ ಜತೆ ಚರ್ಚಿಸಿದ್ದೇನೆ ಎಂದರು. ಸ್ಥಳೀಯ ಸಮಸ್ಯೆಗಳು ಏನಿದೆ, ಅದನ್ನು ಹೇಗೆ ಬಗೆಹರಿಸಬೇಕು ಎಂದು ಯೋಜನೆ ರೂಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಕರ್ನಾಟಕದಲ್ಲಿ ಮಹಿಳಾ ಅಭ್ಯರ್ಥಿಗಳು ಹೆಚ್ಚಿಲ್ಲ ಎಂದು ತಮಿಳು ಮಾಧ್ಯಮಗಳು ಪ್ರಶ್ನಿಸಿದವು ಎಂದ ಅವರು ಇನ್ನೂ ಹೆಚ್ಚೆಚ್ಚು ಮಹಿಳಾ ಸ್ಪರ್ಧಿಗಳು ಬರಬೇಕು ಎಂಬುದೇ ನಮ್ಮ ಆಸೆ ಎಂದರು.