Mysore
20
overcast clouds
Light
Dark

ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದು ನಿಜ : ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆರು ತಿಂಗಳುಗಳು ಕಳೆದರೂ ಕೂಡ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿದ್ದುದ್ದರ ಕುರಿತು ಅಸಮಾಧಾನ ಹೊರಹಾಕಿದ್ದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ತಮಗೆ ಹೈಕಮಾಂಡ್ ಮೇಲಿದ್ದ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಇದೀಗ ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದೆ. ಈ ಕೆಲಸವನ್ನು ಮೂರು ತಿಂಗಳ ಮುಂಚೆಯೇ ಮಾಡಬೇಕಿತ್ತು. ಆಗಲೇ ವಿಪಕ್ಷ ನಾಯಕನನ್ನು ನೇಮಕ ಮಾಡಿದ್ದರೆ ಬಿಜೆಪಿ ಪಕ್ಷ ಇನ್ನು ಶಕ್ತಿಯುತವಾಗಿರುತ್ತಿತ್ತು. ಈ ವಿಳಂಬ ನೀತಿಯ ಕುರಿತು ನನಗೆ ಅಸಮಾಧಾನವಿತ್ತು ಆದರೆ ಈಗ ಅದು ಶಮನವಾಗಿದೆ ಎಂದಿದ್ದಾರೆ.

 ಅಶೋಕ್ ಅವರು ವಿಪಕ್ಷ ನಾಯಕನಾಗಿರುವುದು ಸಂತಸದ ಸಂಗತಿ. ಅವರೊಂದಿಗೆ ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತೇವೆ. ವಿಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ರಾಜ್ಯಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರು ಎಲ್ಲರ ವಿಶ್ವಾಸವನ್ನು ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಆಂತರಿಕ ಗೊಂದಲ ನಿಭಾಯಿಸುವ ಶಕ್ತಿ ಇವರಿಬ್ಬರಿಗಿದೆ ಎಂದು ಹೇಳಿದ್ದಾರೆ.

ಆರ್. ಅಶೋಕ್ ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳಿವೆ. ಮುಂದೊಂದು ದಿನ ಅವರು ಮುಖ್ಯಮಂತ್ರಿಗಳಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಅಶೋಕ್ ಅವರು ಅಸಮಾಧಾನಿಕ ನಾಯಕರ ಮುನಿಸನ್ನು ಶಮನ ಮಾಡಲು ಮುಂದಾಗಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಳ್ಳುವುದರ ಜೊತೆಗೆ ನಾಯಕರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ