ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ( ಫೆಬ್ರವರಿ 1 ) ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದರು. ದೇಶಿ ಪ್ರವಾಸೋದ್ಯಮದ ಉತ್ಸಾಹವನ್ನು ಹೆಚ್ಚಿಸಲು ಲಕ್ಷ ದ್ವೀಪ ಸೇರಿದಂತೆ ಹಲವು ದ್ವೀಪಗಳ ಅಭಿವೃದ್ಧಿ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಭಾಷಣದಲ್ಲಿ ತಿಳಿಸಿದರು.
ಈ ಮೂಲಕ ಮತ್ತೊಮ್ಮೆ ಭಾರತ ಮಾಲ್ಡೀವ್ಸ್ಗೆ ಶಾಕ್ ಕೊಟ್ಟಿದೆ. ಹೌದು, ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸ ಕೈಗೊಂಡು ಅಲ್ಲಿನ ಬೀಚ್ನಲ್ಲಿ ತೆಗಿಸಿದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಲಕ್ಷದ್ವೀಪ ಹಾಗೂ ಮಾಲ್ಡೀವ್ಸ್ ಹೋಲಿಕೆ ಮಾಡಿ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಇತ್ತೀಚೆಗಷ್ಟೆ ಮಾಲ್ಡೀವ್ಸ್ ಪ್ರಧಾನಮಂತ್ರಿ ಚೀನಾ ಪ್ರವಾಸ ಕೈಗೊಂಡಿದ್ದು, ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಮೋದಿ ಲಕ್ಷದ್ವೀಪಕ್ಕೆ ಒತ್ತು ಕೊಟ್ಟಿದ್ದು ಮಾಲ್ಡೀವ್ಸ್ ಪ್ರವಾಸದ ಮೇಲೆ ಪ್ರಭಾವ ಬೀರಿದ ಕಾರಣ ಮಾಲ್ಡೀವ್ಸ್ ಪ್ರಧಾನಿ ಭಾರತದ ಜತೆ ಸಮಾಧಾನಕರ ಸಂಬಂಧವನ್ನು ಹೊಂದಿಲ್ಲದ ರಾಷ್ಟ್ರಗಳಲ್ಲೊಂದು ಎಂದೇ ಕರೆಯಲ್ಪಡುವ ಚೀನಾ ಪ್ರವಾಸವನ್ನು ಕೈಗೊಂಡಿದ್ದಾರೆ ಎಂದೂ ಸಹ ನೆಟ್ಟಿಗರು ಮಾತನಾಡಿಕೊಳ್ಳಲಾರಂಭಿಸಿದ್ದರು. ಹೀಗಾಗಿ ಬಜೆಟ್ನಲ್ಲಿ ಲಕ್ಷದ್ವೀಪದ ಅಭಿವೃದ್ಧಿ ಬಗ್ಗೆ ಉಲ್ಲೇಖಿಸಿದ್ದು ಮಾಲ್ಡೀವ್ಸ್ಗೆ ಭಾರತ ಪರೋಕ್ಷವಾಗಿ ಕೊಟ್ಟ ಕೌಂಟರ್ ಎಂದೇ ಹೇಳಲಾಗುತ್ತಿದೆ.





