Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ರಾಮ ಮಾಂಸಾಹಾರಿಯಾಗಿದ್ದ: ವಿವಾದದ ಬಳಿಕ ಕ್ಷಮೆ ಕೋರಿದ ಜಿತೇಂದ್ರ ಅವ್ಹಾದ್

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಾಜಿ ಸಚಿವ ಜಿತೇಂದ್ರ ಅವ್ಹಾದ್ ಅವರು ʼಶ್ರೀ ರಾಮ ಮಾಂಸಾಹಾರಿಯಾಗಿದ್ದʼ ಎಂಬ ಹೇಳಿಕೆ ಮೂಲಕ ಬುಧವಾರ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಹೇಳಿಕೆಗೆ ಅವರು ಗುರುವಾರ ಕ್ಷಮೆ ಕೋರಿದ್ದಾರೆ.

ಆದರೆ ತಾವು ಯಾವುದನ್ನೂ ಸಂಶೋಧನೆ ಮಾಡದೆ ಹೇಳುವುದಿಲ್ಲ ಎಂದಿರುವ ಅವರು, ಹಿಂದೂ ಮಹಾ ಪುರಾಣ ರಾಮಾಯಣವು ಹೇಳಿರುವುದನ್ನು ಉಲ್ಲೇಖಿಸಿದೆ ಎಂದಿದ್ದಾರೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವ್ಹಾದ್, “ರಾಮ ನಮ್ಮವನು. ಆತ ಬಹುಜನ ಸಮುದಾಯದವನು. ರಾಮ ಬೇಟೆಯಾಡಿ ಊಟ ಮಾಡುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕು ಎಂದು ನೀವು ಬಯಸುತ್ತಿದ್ದೀರಿ. ಆದರೆ ನಾವು ಆತನನ್ನು ನಮ್ಮ ಆದರ್ಶ ಎಂದು ಪರಿಗಣಿಸಿ ಮಟನ್ ಸೇವಿಸುತ್ತೇವೆ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಆತ ಮಾಂಸಾಹಾರಿಯಾಗಿದ್ದ” ಎಂದು ಹೇಳಿದ್ದರು.

ರಾಮನ ವನವಾಸದ ಅವಧಿಯನ್ನು ಉಲ್ಲೇಖಿಸಿದ್ದ ಅವರು, “14 ವರ್ಷ ಕಾಡಿನಲ್ಲಿ ಕಳೆದ ವ್ಯಕ್ತಿಯು ಸಸ್ಯಾಹಾರವನ್ನು ಎಲ್ಲಿಂದ ಪಡೆಯಲು ಸಾಧ್ಯ?” ಎಂದು ಪ್ರಶ್ನಿಸಿದ್ದರು.

ಭಾರತವನ್ನು ಸಸ್ಯಾಹಾರಿ ದೇಶವನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಆದರೆ ದೇಶದ ಶೇ 80ರಷ್ಟು ಜನಸಂಖ್ಯೆ ಈಗಲೂ ಮಾಂಸಾಹಾರಿಗಳಾಗಿದ್ದಾರೆ ಮತ್ತು ಅವರು ಶ್ರೀ ರಾಮನ ಭಕ್ತರೂ ಹೌದು” ಎಂದಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಕೆಲವು ದಿನಗಳ ಮುಂಚೆ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಅವ್ಹಾದ್ ಅವರನ್ನು ಟೀಕಿಸಿರುವ ಬಿಜೆಪಿ, ಶ್ರೀ ರಾಮನ ವಿರುದ್ಧ ‘ಆಕ್ಷೇಪಾರ್ಹ ಹೇಳಿಕೆ’ ನೀಡಿದ ಆರೋಪದಡಿ ಅವರ ವಿರುದ್ಧ ದೂರು ನೀಡಿದೆ.

ನೋವಾಗಿದ್ದರೆ ಕ್ಷಮೆ ಕೋರುವೆ
ಗುರುವಾರ ಪ್ರತಿಕ್ರಿಯೆ ನೀಡಿರುವ ಅವ್ಹಾದ್, “ನಾನು ಯಾವುದನ್ನೂ ಸಂಶೋಧನೆ ಮಾಡದೆ ಮಾತನಾಡುವುದಿಲ್ಲ. ನಾನು ತೀವ್ರಗೊಳಿಸಲು ಬಯಸುವುದಿಲ್ಲ. ಆದರೆ ನಾನು ಹೇಳಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದಿದ್ದಾರೆ.

“ನಾನು ಭಾಷಣ ಮಾಡಿದ ಹಲವಾರು ಸಂದರ್ಭಗಳಿವೆ. ನನ್ನ ಭಾಷಣದಲ್ಲಿ ನಾನು ಯಾವುದನ್ನೂ ತಿರುಚಿಲ್ಲ. ನಾನು ಈ ವಿಚಾರವನ್ನು ಮತ್ತಷ್ಟು ಬೆಳೆಯಲು ಬಯಸುವುದಿಲ್ಲ. ಆದರೆ ವಾಲ್ಮೀಕಿ ರಾಮಾಯಣದಲ್ಲಿ, ಅನೇಕ ಕಾಂಡಗಳಿವೆ. ಅಯೋಧ್ಯಾ ಕಾಂಡದ 102ನೇ ಶ್ಲೋಕದಲ್ಲಿ ಅದನ್ನು ಉಲ್ಲೇಖಿಸಲಾಗಿದೆ” ಎಂದು ಹೇಳಿದ್ದಾರೆ.

ತರ್ಕಬದ್ಧವಾಗಿ ಮಾತನಾಡಲು ಸಾಧ್ಯವಾಗದವರು ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಮಾತನಾಡುತ್ತಾರೆ. ಆದರೆ ‘ರಾಮ್ ರಾಮ್’ ಎಂದು ಪಠಿಸುವವರಿಗೆ ನಾನು ಹೇಳಲು ಬಯಸುವುದು, ರಾಮ ನಮ್ಮ ಹೃದಯಗಳಲ್ಲಿ ವಾಸಿಸುತ್ತಿದ್ದಾನೆ ಎಂದು” ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ