Mysore
30
clear sky

Social Media

ಗುರುವಾರ, 05 ಮಾರ್ಚ್ 2026
Light
Dark

Chennai Rains: ಮಾನವೀಯತೆ ಇನ್ನೂ ಬದುಕಿದೆ; ರಕ್ಕಸ ಮಳೆಯ ನಡುವೆ ಮನಗೆದ್ದ ಘಟನೆಗಳಿವು

ಚೆನ್ನೈ ನಗರ ಮಿಚಾಂಗ್‌ ಚಂಡಮಾರುತದ ಅಬ್ಬರಕ್ಕೆ ಕಳೆದ ಒಂದು ವಾರದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಗಂಟೆಗೆ ಸುಮಾರು ನೂರು ಕಿಲೋಮೀಟರ್‌ ವೇಗದಲ್ಲಿ ಬೀಸಿದ ಚಂಡಮಾರುತಕ್ಕೆ ಚೆನ್ನೈ ನಗರ ಒಂದು ವಾರ ಸ್ಥಬ್ದವಾಗಿಬಿಟ್ಟಿದೆ. ಮಳೆಯ ಅಬ್ಬರ ಕಡಿಮೆಯಾದರೂ ರಸ್ತೆಯಲ್ಲಿ ಮಳೆ ನೀರು ಮಾತ್ರ ನದಿಯ ಹಾಗೆ ಹರಿಯುತ್ತಲೇ ಇದೆ.

ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಅಗತ್ಯವಾದ ಸಹಾಯವನ್ನು ಮಾಡಲು ಮುಂದಾಗುತ್ತಿದ್ದಾರೆ. ಇನ್ನು ರಾಜಕಾರಣಿಗಳಿಗೂ ಮುನ್ನ ಮಳೆಯ ನಡುವೆಯೇ ಚೆನ್ನೈ ಸಂತ್ರಸ್ತರಿಗೆ ಸಹಾಯಹಸ್ತವನ್ನು ಚಾಚಿದ್ದು ಸ್ವಯಂ ಸೇವಕರು, ಪೊಲೀಸರು, ಭಾರತೀಯ ಸೇನೆ ಹಾಗೂ ತಮಿಳು ಸ್ಟಾರ್‌ ನಟರ ಅಭಿಮಾನಿಗಳು.

ಇವರು ಮಾಡಿದ ಸಹಾಯದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ದೊಡ್ಡ ಮಟ್ಟದಲ್ಲಿ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿವೆ. ಅಂತಹ ಮನಗೆದ್ದ ಘಟನೆಗಳ ಕುರಿತ ಸಣ್ಣ ವರದಿ ಮುಂದಿದೆ ಓದಿ..

 

ಪುಟ್ಟ ಮಗುವನ್ನು ರಕ್ಷಿಸಿದ ಪೊಲೀಸ್‌

ಚೆನ್ನೈ ಮಳೆಯಲ್ಲಿ ಸಿಲುಕಿದವರ ರಕ್ಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ತಮಿಳುನಾಡು ಪೊಲೀಸರು. ನೀರು ಪ್ರವಾಹದಂತೆ ಹರಿಯುತ್ತಿದ್ದರೂ ಹಲವಾರು ಕಡೆ ಸಿಲುಕಿದ್ದವರನ್ನು ರಕ್ಷಿಸಿದ ಪೊಲೀಸರು ರಿಯಲ್‌ ಲೈಫ್‌ ಹೀರೊಗಳು ಎನಿಸಿಕೊಂಡಿದ್ದಾರೆ. ಈ ರಕ್ಷಣಾಕಾರ್ಯದ ವೇಳೆ ಪೊಲೀಸ್‌ ಒಬ್ಬರು ಪುಟ್ಟ ಕಂದಮ್ಮನನ್ನು ಕೈನಲ್ಲಿ ಹಿಡಿದು ನೀರು ದಾಟುತ್ತಿರುವ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಭಾರೀ ಪ್ರಶಂಸೆಗೆ ಕಾರಣವಾಗಿದೆ.

 

ಬೋಟ್‌ನಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸಿದ ಸ್ವಯಂ ಸೇವಕರು

ಇನ್ನು ಮಳೆ ಆರಂಭವಾಗಿ ಪ್ರವಾಹದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಲ್ಲೆಲ್ಲಿ ಜನರು ಸಿಲುಕಿಕೊಂಡಿದ್ದಾರೋ ಅಂತಹ ಸ್ಥಳಗಳನ್ನು ಪತ್ತೆಹಚ್ಚಿ ಅಲ್ಲಿಯವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಾ ಬಂದಿರುವುದು ಸ್ವಯಂ ಸೇವಕರು. ಇವರು ಬೋಟ್‌ಗಳನ್ನು ಬಳಸಿ ಆಳವಾದ ನೀರಿನ ನಡುವೆ ಮನೆಗಳ ಮೇಲೆ ಸಿಲುಕಿದ್ದವರನ್ನು ರಕ್ಷಿಸಿ ಸುರಕ್ಷಿತವಾದ ಜಾಗಕ್ಕೆ ಸ್ಥಳಾಂತರಿಸಿದ್ದರು.

 

ಶ್ವಾನಗಳನ್ನು ಬೋಟ್‌ನಲ್ಲಿ ರಕ್ಷಿಸಿದ ಸ್ವಯಂ ಸೇವಕರು

ಸ್ವಯಂ ಸೇವಕರು ಕೇವಲ ಮಾನವರನ್ನು ಮಾತ್ರವಲ್ಲದೇ ನಾಯಿ ಹಾಗೂ ಬೆಕ್ಕಿನಂತಹ ಸಾಕು ಪ್ರಾಣಿಗಳನ್ನೂ ಸಹ ರಕ್ಷಿಸಿದ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನೀರಿನ ನಡುವೆ ದಿಕ್ಕು ತೋಚದೇ ಕುಳಿತಿದ್ದ ಶ್ವಾನಗಳನ್ನು ಬೋಟ್‌ನಲ್ಲಿ ಕರೆತಂದು ಸುರಕ್ಷಿತವಾದ ಜಾಗಕ್ಕೆ ಸ್ವಯಂ ಸೇವಕರು ತಲುಪಿಸಿದ್ದಾರೆ. ಅಲ್ಲದೇ ನೀರಿನಲ್ಲಿ ಈಜುತ್ತಾ ಸೂರಿಗಾಗಿ ಹುಡುಕಾಡುತ್ತಿದ್ದ ಶ್ವಾನಗಳನ್ನು ತಮ್ಮ ಮನೆಗಳ ಗೇಟ್‌ಗಳನ್ನು ತೆರೆದು ಒಳ ಕರೆದು ಅವುಗಳನ್ನು ಬಟ್ಟೆಯಿಂದ ಒರೆಸಿ ರಕ್ಷಿಸಿದ ವಿಡಿಯೊ ಸಹ ನೆಟ್ಟಿಗರ ಮನ ಗೆದ್ದಿದೆ.

 

ಜೀವ ಒತ್ತೆ ಇಟ್ಟು ಕೆಲಸ ನಿರ್ವಹಿಸಿದ ವಿದ್ಯುತ್‌ ಇಲಾಖೆ ಸಿಬ್ಬಂದಿ

ಚೆನ್ನೈ ವಿದ್ಯುತ್‌ ಇಲಾಖೆಯ ಸಿಬ್ಬಂದಿ ಮಳೆ ಸುರಿಯುತ್ತಿದ್ದರೂ, ನೀರು ಉಕ್ಕಿ ಹರಿಯುತ್ತಿದ್ದರೂ ದೊಡ್ಡ ದೊಡ್ಡ ಹಗ್ಗ ಬಳಸಿ ವಿದ್ಯುತ್‌ ಕಂಬಗಳನ್ನು ಹತ್ತಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಮಾಡಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

 

ಚಲನಚಿತ್ರ ನಟರ ಅಭಿಮಾನಿಗಳಿಂದ ಊಟದ ವ್ಯವಸ್ಥೆ

ಇನ್ನು ತಮಿಳುನಾಡಿನಲ್ಲಿ ಚಿತ್ರ ನಟರೆಂದರೆ ಅತಿಹೆಚ್ಚು ಕ್ರೇಜ್‌ ಎಂಬುದು ತಿಳಿದಿರುವ ವಿಷಯವೇ. ಈ ನಟರ ಅಭಿಮಾನಿಗಳು ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಬೋಟ್‌ಗಳಿಗೆ ಊಟ ಹಾಗೂ ಟೀ ತುಂಬಿಕೊಂಡು ನೀರಿನಿಂದ ಆವೃತವಾಗಿದ್ದ ಮನೆಗಳ ಬಳಿಗೆ ತೆರಳಿ ಹಂಚಿ ಹಸಿವನ್ನು ನೀಗಿಸಿದ್ದಾರೆ.

ಈ ಎಲ್ಲಾ ದೃಶ್ಯಗಳನ್ನು ಕಂಡ ನೆಟ್ಟಿಗರು ಮೆಟ್ರೋ ರೈಲಿನಂತೆ ಮುನ್ನುಗ್ಗುತ್ತಿರುವ 5ಜಿ ಮನಸ್ಸುಳ್ಳ ಅಪ್‌ಡೇಟೆಡ್‌ ಜನರಿರುವ ಇಂದಿನ ದಿನದಲ್ಲೂ ಮಾನವೀಯತೆ ಇನ್ನೂ ಬದುಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!