ವಯನಾಡ್: ಘೋರ ಭೂಕುಸಿತಕ್ಕೆ ತುತ್ತಾಗಿದ್ದ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲ ಗ್ರಾಮಗಳಲ್ಲಿ ʻತಿರುಓಣಂʼ ಹಬ್ಬದ ಯಾವುದೇ ಸಂಭ್ರಮ ಕಾಣಲಿಲ್ಲ.
ಅಷ್ಟೇ ಅಲ್ಲದೇ, ಪೂಕಳಂ(ಹೂವಿನ ಚಿತ್ತಾರ) ಊಂಜಲ್(ಉಯ್ಯಾಲೆ) ಅಥವಾ ಯಾವುದೇ ಇತರೆ ಆಚರಣೆಗಳೂ ಕಂಡುಬರಲಿಲ್ಲ. ವಯನಾಡಿನ ಜನತೆ ಕಳೆದ ಬಾರಿ ಜಾತಿ ಧರ್ಮ ಮೀರಿ ಸಂಭ್ರಮದಿಂದ ಪೂಕಳಂ ಬಿಡಿಸಿ, ಸಾಂಪ್ರದಾಯಿಕ ಆಟಗಳನ್ನು ಆಡಿದ್ದರು.
ಆದರೆ, ಇದೀಗ ವಯನಾಡಿನ ಘೋರ ಭೂಕುಸಿತ ಇಲ್ಲಿನ ಜನರ ಸಂತೋಷವನ್ನೇ ಕಿತ್ತುಕೊಂಡಿದೆ. ಮುಂಡಕ್ಕೈ ಮತ್ತು ಚೂರಲ್ಮಲ ಜನತೆ ಮನೆ ಕಳೆದುಕೊಂಡ ಕಾರಣ ಹತ್ತಿರದ ಬಾಡಿಗೆ ಅಥವಾ ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಹಬ್ಬದ ಯಾವುದೇ ಸಂಭ್ರಮವಿರಲಿಲ್ಲ.





