ಹೊಸದಿಲ್ಲಿ : ಭಾರತದ ವಿವಿಧ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಬ್ರಿಟನ್ನಲ್ಲಿರುವ ಕೆಲವು ದೇಶಭ್ರಷ್ಟರು ಶೀಘ್ರದಲ್ಲೇ ಭಾರತಕ್ಕೆ ಗಡೀಪಾರಾಗುವ ಬೆಳವಣಿಗೆಗಳು ಕಂಡು ಬರುತ್ತಿವೆ.
ಯುನೈಟೆಡ್ ಕಿಂಗ್ಡಮ್ನಲ್ಲಿ (ಯು.ಕೆ.) ಅವಿತಿರುವ ವಿಜಯ್ ಮಲ್ಯ, ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ನ್ಯಾಯಾಂಗ ವ್ಯವಸ್ಥೆ ಈಗಾಗಲೇ ಒಪ್ಪಿಗೆ ನೀಡಿದ್ದು, ಈಗಾಗಲೇ ಅಲ್ಲಿನ ತಜ್ಞರ ತಂಡವೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಮಲ್ಯ ಅಥವಾ ನೀರವ್ ಮೋದಿಯವರಿಗಾಗಿ ನಿಗದಿಗೊಳಿಸಲಾಗಿರುವ ಹೈ ಸೆಕ್ಯುರಿಟಿ ಜೈಲು ಕೊಠಡಿಗಳ ಸಮುಚ್ಚಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದೆ.
ಈಗಾಗಲೇ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಮುಂತಾದವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ, ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. ಇವರಷ್ಟೇ ಅಲ್ಲದೆ, ಯುಕೆನಲ್ಲಿ ನೆಲೆಸಿರುವ ಭಾರತೀಯ ಮೂಲದ ಕಳ್ಳಸಾಗಣೆದಾರರು, ಅಕ್ರಮ ಶಸ್ತ್ರಾಸ್ತ್ರ ಸರಬರಾಜುದಾರರು ಸೇರಿ ಒಟ್ಟು ೨೦ ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತ ಸರ್ಕಾರ, ಯುಕೆ ಸರ್ಕಾರವನ್ನು ಕೋರಿದೆ.





