ಮೈಸೂರು: ತಮಿಳುನಾಡಿನಲ್ಲಿ ಅಕ್ಟೋಬರ್.11ರಂದು ನಡೆದ ಮೈಸೂರು-ದರ್ಭಾಂಗ ರೈಲು ಅಪಘಾತ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಪ್ರಾರಂಭಿಸಿದೆ.
ಇಂದು ಎನ್ಐಎ ತನಿಖಾ ತಂಡವೂ ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿಯಾಗಿ ದುರಂತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಈ ದುರಂತದ ಬಗ್ಗೆ ಈಗಾಗಲೇ ಕೊರುಕ್ಕುಪೇಟೆಯ ಸರ್ಕಾರಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು, ರೈಲು ಅಪಘಾತಗಳನ್ನು ತಡೆಗಟ್ಟುವಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ರೈಲ್ವೆ ಮೂಲಗಳು ಸಿಗ್ನಲ್ ವೈಫಲ್ಯದಿಂದ ಅಪಘಾತವಾಗಿದೆ. ಏಕೆಂದರೆ ಎಕ್ಸ್ಪ್ರೆಸ್ ರೈಲು ರಾತ್ರಿ 8.27 ಗಂಟೆಗೆ ಪೊನ್ನೇರಿ ರೈಲು ನಿಲ್ದಾಣದ ಮೂಲಕ ಸಾಗಿತ್ತು. ಆ ನಂತರ ಮುಖ್ಯ ಮಾರ್ಗದಲ್ಲಿ ಮುಂದಿನ ನಿಲ್ದಾಣವಾದ ಕವರೈಪೆಟ್ಟೈಗೆ ತೆರಳಲು ಅನುಮತಿ ನೀಡಲಾಯಿತು ಎಂದು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಆಗಂತುಕರು ಪೊನ್ನೆರಿ ಹಾಗೂ ಅನುಪಮ್ ಪಟ್ಟು ನಿಲ್ದಾಣಗಳ ಮಧ್ಯದಲ್ಲಿ ರೈಲು ಹಳಿ ತಪ್ಪಿಸಲು ಪ್ರಯತ್ನ ಮಾಡಿದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.





