ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ ವ್ಯಕ್ತಿಯೊಬ್ಬರ ಆರೋಪಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ನಲ್ಲಿರುವ ಇಶಾ ಫೌಂಡೇಶನ್ ವಿರುದ್ಧ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ವ್ಯಕ್ತಿಯ ಇಬ್ಬರೂ ಪುತ್ರಿಯರು ವಯಸ್ಕರಾಗಿದ್ದು, ಅವರು ಸ್ವತಃ ಇಚ್ಚೆಯಿಂದ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಶುಕ್ರವಾರ ತೀರ್ಪು ನೀಡಿದೆ.
ಸ್ವಯಂ ಪ್ರೇರಣೆಯಿಂದ ನಾವು ಆಶ್ರಮದಲ್ಲಿ ನೆಲೆಸಿದ್ದೇವೆ ಎಂದು ಸ್ವತಃ ಆ ಇಬ್ಬರು ಮಹಿಳೆಯರೆ ನ್ಯಾಯಾಲಯಕ್ಕೆ ಹೇಳಿದ್ದಾರೆ. ಮದ್ರಾಸ್ ಹೈಕೋರ್ಟ್ನಲ್ಲಿ ಇದೇ ವಿಷಯ ಕುರಿತು ಈ ಮೊದಲೇ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದ್ದರಿಂದ, ಅದನ್ನು ಸುಪ್ರೀಂ ಕೋರ್ಟ್ ಮುಂದುವರೆಸುವುದು ಅನಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ತಮ್ಮ ಇಬ್ಬರ ಹೆಣ್ಣು ಮಕ್ಕಳನ್ನ ಅಕ್ರಮವಾಗಿ ವಶದಲ್ಲಿರಿಸಿಕೊಳ್ಳಲಾಗಿದೆ. ಹೀಗಾಗಿ ಅವರನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡಿನ ನಿವೃತ್ತ ಪ್ರಾಧ್ಯಾಪಕರು ಕೋರಿದ ಅರ್ಜಿ ಇದಾಗಿತ್ತು.