ನವದೆಹಲಿ: ಪೂಜಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯಿದೆ 1991ರ ಅಡಿಯಲ್ಲಿ ಮಸೀದಿ, ಮಂದಿರ ಸೇರಿದಂತೆ ಇನ್ನಿತರ ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ವಿಚಾರಣಾ ನ್ಯಾಯಾಲಯಗಳು ಆದೇಶ ನೀಡಬಾರದು ಎಂದು ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ.
1991ರ ಕಾಯಿದೆಯ ಕೆಲವು ನಿಬಂಧನೆಗಳು ವಿಚಾರಣೆಗೆ ವಿರುದ್ಧವಾಗಿವೆ ಎಂದು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿದ್ದು, ಈ ವಿಚಾರವಾಗಿ ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೆ ಯಾವುದೇ ಮೊಕದ್ದಮೆಗಳನ್ನು ದಾಖಲಿಸುವಂತಿಲ್ಲ. ಹಾಗೆಯೇ ಈಗ ನ್ಯಾಯಾಲಯದಲ್ಲಿರುವ ಅರ್ಜಿಗಳ ಕುರಿತಂತೆ ಪರಿಣಾಮಕಾರಿ ಆದೇಶಗಳನ್ನು ನೀಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.
ಕೇಂದ್ರ ಸರ್ಕಾರ ಈ ಕುರಿತಂತೆ ತಮ್ಮ ಪ್ರತಿಕ್ರಿಯೆ ನೀಡುವವರೆಗೂ ಮುಂದಿನ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಹೇಳಿದೆ. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶೀಘ್ರದಲ್ಲೇ ಉತ್ತರ ನೀಡುತ್ತೇವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ಈ ಆದೇಶವು ಧಾರ್ಮಿಕ ಮಾಲಿಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿರುವ ಸುಮಾರು 10ಕ್ಕೂ ಹೆಚ್ಚು ಅರ್ಜಿಗಳ ಮೇಲೆ ಪರಣಾಮ ಬೀರುತ್ತದೆ.
ಆಗಸ್ಟ್ 15, 1947ರಂದು ಪೂಜಾ ಧಾರ್ಮಿಕ ಸ್ಥಳಗಳು ತಮ್ಮ ಮೂಲ ನೆಲೆಯಲ್ಲಿಯೇ ಇರುತ್ತವೆ. ಎಂದು ಪೂಜಾ ಸ್ಥಳ ಕಾಯಿದೆ ಹೇಳುತ್ತದೆ. ಈ ಕಾಯಿದೆಯನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಅರ್ಜಿ ಸೇರಿದಂತೆ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಇನ್ನು ಬಾಕಿ ಉಳಿದಿವೆ.





