ಡೆಹ್ರಡೂನ್ : ಹರಿದ್ವಾರದ ಮಾನಸಾದೇವಿ ದೇವಸ್ಥಾನದ ಮೆಟ್ಟಿಲು ಮಾರ್ಗದಲ್ಲಿ ಭಾರೀ ಜನಸಮೂಹ ಜಮಾಯಿಸಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಈ ಘಟನೆ ಜನರಲ್ಲಿ ಹಠಾತ್ ಅವ್ಯವಸ್ಥೆ ಮತ್ತು ಭೀತಿಯನ್ನು ಉಂಟುಮಾಡಿದೆ. ಇತ್ತೀಚೆಗೆ ಪುರಿ ಜಗನ್ನಾಥ ರಥ ಯಾತ್ರೆಯ ವೇಳೆ ಕಾಳ್ತುಳಿತ ಉಂಟಾಗಿ ಮೂವರು ಗಾಯಗೊಂಡು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಮುಖ್ಯ ದೇವಸ್ಥಾನಕ್ಕೆ ಹೋಗುವ ದೇವಸ್ಥಾನದ ರಸ್ತೆಯಲ್ಲಿರುವ ಮೆಟ್ಟಿಲುಗಳ ಮೇಲೆ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತಕ್ಕೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲವಾದರೂ, ಪವಿತ್ರ ಶ್ರಾವಣ ಋತುವಿನ ಕಾರಣ ದೇವಾಲಯದಲ್ಲಿ ಭಾರೀ ಜನಸಮೂಹ ಜಮಾಯಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ವಿದ್ಯುತ್ ಆಘಾತದಿಂದ ಕಾಲ್ತುಳಿತ ಸಂಭವಿಸಿರಬಹುದು, ಇದರಿಂದಾಗಿ ಭಕ್ತರಲ್ಲಿ ಹಠಾತ್ ಗೊಂದಲ ಮತ್ತು ಭೀತಿ ಉಂಟಾಗಿದೆ ಎಂದು ಶಂಕಿಸಲಾಗಿದೆ.
ವಿದ್ಯುದಾಘಾತ: ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಗೆ ವಿದ್ಯುತ್ ಆಘಾತ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಸಂಭವನೀಯ ವಿದ್ಯುದಾಘಾತದ ಕಾರಣವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಹರಿದ್ವಾರದ ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತದ ಸುದ್ದಿ ಅತ್ಯಂತ ದುಃಖಕರವಾಗಿದೆ. ಎಸ್ಡಿಆರೆಫ್, ಸ್ಥಳೀಯ ಪೊಲೀಸ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.





