ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 9ನೇ ಆಡಳಿತ ಸಮಿತಿ ಸಭೆ ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಅಜೆಂಡಾವನ್ನು ಸಭೆ ಹೊಂದಿದೆ.
ಈ ಸಭೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳು ಬಹಿಷ್ಕಾರ ಹಾಕಿವೆ. ಈ ನಡುವೆ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಸಭೆಗೆ ಹಾಜರಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನಗೆ ಸಭೆಯಲ್ಲಿ ಮಾತನಾಡಲು ಸಮಯಾವಕಾಶ ನೀಡಲಿಲ್ಲ, ನನ್ನ ಮೈಕ್ ಅನ್ನು ಆಫ್ ಮಾಡಲಾಯಿತು ಎಂದು ಆರೋಪಿಸಿ ಸಭೆಯಿಂದ ಅರ್ಧಕ್ಕೆ ಸಿಟ್ಟಿನಿಂದ ಹೊರ ನಡೆದಿದ್ದಾರೆ.
ಇನ್ನೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಈ ಸಭೆಗೆ ಭಾಗವಹಿಸಲಿಲ್ಲ. ಬದಲಿಗೆ ಅವರ ಪ್ರತಿನಿಧಿಯಾದ ಡಿಸಿಎಂ ಸಾಮ್ರಾಟ್ ಚೌಧುರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಭಾಗವಹಿಸಿದ್ದರು. ದೆಹಲಿ ಸಿಎಂ ಕೇಜ್ರಿವಾಲ್ ಜೈಲಿನಲ್ಲಿದ್ದರೂ ಅವರ ಯಾವ ಪ್ರತಿನಿಧಿಯೂ ಸಭೆಯಲ್ಲಿ ಭಾಗವಹಿಸಲಿಲ್ಲ.
ನೀತಿ ಆಯೋಗದ ಸಭೆಗೆ ಬಜೆಟ್ನಲ್ಲಿನ ತಾರತಮ್ಯ ವಿರೋಧೀಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್, ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು, ಜಾರ್ಖಂಡ್ ಸಿಎಂ ಹೇಮಂತ್ ಸೂರೆನ್, ಕೇರಳದ ಸಿಎಂ ಪಿಣರಾಯ ವಿಜಯನ್ ಗೈರಾಗಿದ್ದಾರೆ.