ಅಯೋಧ್ಯೆ : ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ.
ಸೂರ್ಯ ರಶ್ಮಿಯು ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ದಿವ್ಯ ದೃಶ್ಯ ಕಂಡುಬಂದಿದೆ. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ ಬಾಲ ರಾಮನ ಮೂರ್ತಿಯ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕ ರೂಪಿಸಿತು. ಈ ತಿಲಕವು ಮೂರ್ತಿಯ ಮೇಲೆ ಸುಮಾರು 3 ರಿಂದ 4 ನಿಮಿಷಗಳ ಕಾಲ ಕಂಡುಬಂದಿತು. ಈ ವಿಸ್ಮಯವನ್ನು ಶ್ರೀರಾಮನ ಭಕ್ತರು ಕಣ್ತುಂಬಿಕೊಂಡರು. ಈ ಸೂರ್ಯ ರಶ್ಮಿಯು ದೇವರ ಹಣೆಯನ್ನು ಬೆಳಗಿಸಿ, ಆಚರಣೆಗಳಿಗೆ ಆಧ್ಯಾತ್ಮಿಕ ಹೊಳಪನ್ನು ನೀಡಿತು.
2 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ
ಇನ್ನೂ ರಾಮನವಮಿ ಸಂಭ್ರಮದ ಹಿನ್ನೆಲೆ ದೇಶಾದ ವಿವಿಧೆಡೆಯಿಂದ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬರಲಾರಂಭಿಸಿದ್ದಾರೆ. ತಡರಾತ್ರಿ 2 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಸಹ ರಾತ್ರಿ 10 ಗಂಟೆವರೆಗೆ ಬಾಲ ರಾಮನ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.




