ಭುಜ್ (ಗುಜರಾತ್) : ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ವಾಯುಪಡೆ ತೋರಿದ ಶೌರ್ಯವನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಈಗ ಏನಾಯಿತು ಎಂಬುದು ಕೇವಲ ಟ್ರೇಲರ್ ಎಂದು ಪ್ರತಿಪಾದಿಸಿದರು.
ಭುಜ್ ವಾಯುಪಡೆ ನಿಲ್ದಾಣದಲ್ಲಿ ವಾಯುಪಡೆಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಪಾಕಿಸ್ತಾನಕ್ಕೆ ಏನೆಂದು ತೋರಿಸಿದ್ದೇವೆ. ಇದು ಟ್ರೇಲರ್ ಅಷ್ಟೆ. ಸರಿಯಾದ ಸಮಯ ಬಂದಾಗ, ಪೂರ್ಣ ಚಿತ್ರಣವನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ಹೇಳಿದರು.
23 ನಿಮಿಷ ಸಾಕಾಗಿತ್ತು
ಆಪರೇಷನ್ ಸಿಂದೂರ ಸಮಯದಲ್ಲಿ ನಿಮ್ಮ ಶೌರ್ಯ ಭಾರತೀಯರು ಹೆಮ್ಮೆ ಪಡುವಂತಿದೆ. ಪಾಕಿಸ್ತಾನದಲ್ಲಿ ಪೋಷಿಸಲಾಗಿರುವ ಭಯೋತ್ಪಾದಕರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ಅವರನ್ನು ಹತ್ತಿಕ್ಕಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಸಾಕಾಗಿತ್ತು ಎಂದು ಹೇಳಿದರು.
ಭುಜ್ ವಾಯುನೆಲೆಗೆ ಭೇಟಿ
ಗುಜರಾತ್ನ ಭುಜ್ ವಾಯುನೆಲೆಗೆ ಇಂದು ಭೇಟಿ ನೀಡಿದ ಸಚಿವರು, ಸೇನೆಯೊಂದಿಗೆ ಸಂವಾದ ನಡೆಸಿದರು. ಕಳೆದ ವಾರ ನಡೆದ ಪಾಕಿಸ್ತಾನ ಜತೆಗಿನ ಸಂಘರ್ಷದ ವೇಳೆಯಲ್ಲಿ ಪಾಕ್ ಸೇನೆ ಈ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿತ್ತು.





