ವಾರಣಾಸಿ: ಇಂದು ( ಜೂನ್ 18 ) ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 9.26 ಕೋಟಿ ರೈತರಿಗೆ ಒಟ್ಟು 20 ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ದೇಶದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ನೆರವು ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿಯಲ್ಲಿ 17ನೇ ಕಂತನ್ನು ಈ ಬಾರಿ ಬಿಡುಗಡೆ ಮಾಡಲಾಗಿದೆ. ಸದ್ಯ ಎಲ್ಲೆಡೆ ಮುಂಗಾರು ಆಗಮನವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸಲು ಈ ಹಣ ರೈತರಿಗೆ ನೆರವಾಗಲಿದೆ.
ಅಲ್ಲದೇ 30 ಸಾವಿರಕ್ಕೂ ಹೆಚ್ಚಿನ ಸ್ವ ಸಹಾಯ ಗುಂಪುಗಳಿಗೆ ʼಕೃಷಿ ಸಖಿʼ ಹೆಸರಿನ ತರಬೇತಿ ಪತ್ರವನ್ನು ವಿತರಿಸಲಾಯಿತು. ದೇಶಾದ್ಯಂತ ಇರುವ ಕೃಷಿ ಸಹಾಯಕ ಮಹಿಳೆಯರ ಗುಂಪಿಗೆ ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.





