ನವದೆಹಲಿ: ಸಿಂಧೂ ನದಿ ಜಲ ಒಪ್ಪಂದದ ಅಮಾನತ್ತನ್ನು ಮರುಪರಿಶೀಲಿಸಿ ಎಂದು ಭಾರತಕ್ಕೆ ಪಾಕಿಸ್ತಾನ ಮನವಿ ಮಾಡಿಕೊಂಡಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದೆ. ಕದನ ವಿರಾಮ ಘೋಷಣೆಯಾದರೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುವ ಬೆಂಬಲವನ್ನು ಪೂರ್ತಿಯಾಗಿ ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದ ರದ್ದಾಗಿರುತ್ತದೆ ಎಂದು ಭಾರತ ಖಚಿತಪಡಿಸಿದ್ದಕ್ಕೆ ಮೊದಲು ಪಾಕಿಸ್ತಾನ ಅಹಂಕಾರದ ಮಾತುಗಳನ್ನಾಡಿತ್ತು.
ಭಾರತ ಸಿಂಧೂ ಜಲ ಒಪ್ಪಂದ ಅಮಾನತ್ತನ್ನು ಕೈಬಿಡದಿದ್ದರೆ ಕದನವಿರಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ. ನಮಗೆ ನೀರು ಬಿಡದಿದ್ದರೆ ಅದನ್ನು ಹೇಗೆ ಪಡೆಯಬೇಕೆಂಬುದು ನಮಗೆ ಗೊತ್ತಿದೆ ಎಂದು ಪಾಕ್ ಹೇಳಿಕೆ ನೀಡಿತ್ತು. ಅದಕ್ಕೂ ಭಾರತ ಜಗ್ಗದಿದ್ದಾಗ ಇದೀಗ ಮಾತುಕತೆಯ ಮೂಲಕ ಭಾರತದ ಮನವೊಲಿಸಲು ಮುಂದಾಗಿದೆ.
ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಭಾರತವು ಔಪಚಾರಿಕವಾಗಿ ತಿಳಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಸರ್ಕಾರದ ಪರವಾಗಿ ಭಾರತ ಆಕ್ಷೇಪಿಸುವ ನಿರ್ದಿಷ್ಟ ಷರತ್ತುಗಳನ್ನು ಚರ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿದೆ.





