Mysore
20
scattered clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಮದುವೆಗೆ ವಿರೋಧ : ಕಾರಿಗೆ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

ಹೈದರಾಬಾದ್‌ : ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ತೆಲಂಗಾಣದ ಗಡ್ಕೇಸರ್‌ ಜನ್ನಾಪುರ ಬಳಿ ಜರುಗಿದೆ.

ಪರ್ವತರಂ ಶ್ರೀರಾಮ್ ಮತ್ತು ಅಪ್ರಾಪ್ತ ಬಾಲಕಿ ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.

ನೆಲಗೊಂಡ ಜಿಲ್ಲೆಯ ಜೆಬಿ ನಗರದ ನಿವಾಸಿ ಶ್ರೀರಾಮ್ ಸರಪಲ್ಲಿಯಲ್ಲಿ ಸೈಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಂಗಡಿಗೆ ಆಗಾಗ್ಗೆ ಹೋಗಿ ಬರುತ್ತಿದ್ದಾಗ ಅಪ್ರಾಪ್ತ ಬಾಲಕಿಯ ಪರಿಚಯವಾಗಿ, ಪರಿಚಯ ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು.

ಇವರಿಬ್ಬರ ಪ್ರೀತಿಯ ವಿಷಯ ಮನೆಯವರಿಗೆ ಗೊತ್ತಾಗಿದೆ. ಹುಡುಗಿ ಅಪ್ರಾಪ್ತ ಬಾಲಕಿಯಾಗಿದ್ದರಿಂದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸ್ನೇಹಿತರು ಈ ನಡುವೆ ಇವರಿಬ್ಬರಿಗೂ ಮದುವೆ ಮಾಡಿಸಲು ಲಕ್ಷಾಂತರ ಹಣವನ್ನು ಕೂಡ ಸಂಗ್ರಹಿಸಿದ್ದರು ಎನ್ನಲಾಗಿದೆ.

ಕೊನೆಯದಾಗಿ ಎರಡು ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ತಾವು ಒಂದಾಗಲು ಸಾಧ್ಯವಿಲ್ಲವೆಂದು ನೊಂದು ಪ್ರೇಮಿಗಳು ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಬಳಿಕ ಡೆತ್‍ನೋಟ್ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿಯುತ್ತಿದ್ದದ್ದನ್ನು ನೋಡಿ ಸಮೀಪವೇ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಕೆಟ್‍ಗಳಲ್ಲಿ ನೀರು ತಂದು ಬೆಂಕಿ ಆರಿಸಲು ಕೂಡ ಪ್ರಯತ್ನಿಸಿದರಾದರೂ ಬೆಂಕಿ ಜ್ವಾಲೆ ಹೆಚ್ಚಾಗಿದ್ದರಿಂದ ಅದು ವಿಫಲವಾಗಿದೆ. ಈ ಮಧ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಂದಿಸುವಷ್ಟರಲ್ಲಿ ಪ್ರೇಮಿಗಳು ಸಜೀವ ದಹನವಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:
error: Content is protected !!