ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ `ಒಂದು ದೇಶ ಒಂದು ಚುನಾವಣೆ’ ಯೋಜನೆಯ ಕಾರ್ಯ ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಇಂದು ಕೇಂದ್ರ ಸಚಿವ ಸಂಪುಟ ಒಂದು ದೇಶ, ಒಂದು ಚುನಾವಣೆಯನ್ನು ಅಂಗೀಕಾರ ಮಾಡಿರುವ ಹಿನ್ನೆಲೆಯಲ್ಲಿ ಪತ್ರಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಜನರ ಗಮನ ಸೆಳೆಯಲು ಅನೇಕ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಇಂತಹ ಕಾರ್ಯವನ್ನು ರೂಪಿಸಿದೆ ಎಂದು ಮಲ್ಲಿಕಾರ್ಜುನ ಅವರು ಅಭಿಪ್ರಾಯಪಟ್ಟಿದ್ದಾರೆ.
2024ರ ಲೋಕಸಭೆ ಚುನಾವಣೆಯ ಘೋಷಣೆ ವೇಳೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿ ಒಂದು ದೇಶ, ಒಂದು ಚುನಾವಣೆ ಎಂಬ ವರದಿಯನ್ನು ಸಲ್ಲಿಸಿತ್ತು. ಆದರೆ, ಇದನ್ನು ದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವುದು ಅಸಾಧ್ಯವಾಗುತ್ತದೆ. ಬಿಜೆಪಿ ಪಕ್ಷದವರಿಗೆ ರಾಷ್ಟ್ರದಲ್ಲಿ ಯಾವುದೇ ಚುನಾವಣೆ ಎದುರಾದರೂ, ಒಂದು ವಿಚಾರವನ್ನು ಚರ್ಚೆಗೆ ಇಟ್ಟುಕೊಳ್ಳುವುದು ಬಿಜೆಪಿಯ ತಂತ್ರವಾಗಿದೆ. ಅಲ್ಲದೇ ಸಾರ್ವಜನಿಕರು ದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಮರೆಯಾಗಿಸಿ ಈ ವಿಚಾರವನ್ನೇ ಚರ್ಚೆಯಾಗುವಂತೆ ಮಾಡುತ್ತಾರೆ ಎಂದು ಖರ್ಗೆ ಅವರು ತಿಳಿಸಿದ್ದಾರೆ.





