ನವದೆಹಲಿ: ವಿದ್ಯಾರ್ಹತೆ, ತರಬೇತಿ ಇಲ್ಲದ ವೈದ್ಯಕೀಯ ವೃತ್ತಿಪರರ ನಕಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅನಧಿಕೃತ ವೈದ್ಯರು ಹಾಗೂ ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಈರಣ್ಣ ಕಡಾಡಿ ಅವರು ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಇಂದು(ಮಾರ್ಚ್.17) ಶೂನ್ಯ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಚಿಕಿತ್ಸಾ ಪ್ರಕರಣಗಳ ಬಗ್ಗೆ ಗಮನ ಸೆಳೆದು ಮಾತನಾಡಿದ ಅವರು, ಶತಮಾನಗಳಿಂದ ಜನ ಸಾಮಾನ್ಯರು ವೈದ್ಯರಿಗೆ ದೇವರ ಸ್ಥಾನಮಾನ ನೀಡಿದ್ದಾರೆ. ಆದರೆ ಈಗ ವೈದ್ಯಕೀಯ ಕ್ಷೇತ್ರದಲ್ಲಿನ ಅತಿಯಾದ ವಾಣಿಜ್ಯೀಕರಣವು ಈ ವೃತ್ತಿಯ ಘನತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಮೊದಲು ವೈದ್ಯಕೀಯ ವೃತ್ತಿ ಎಂದರೆ ಜನ ಸೇವೆಯಾಗಿತ್ತು, ಆದರೆ ಇದೀಗ ಅದು ಲಾಭ-ಆಧಾರಿತ ಉದ್ಯಮವಾಗಿದೆ ಎಂದರು.
ವೈದ್ಯಕೀಯ ಕಾಲೇಜುಗಳಲ್ಲಿ ಅಧಿಕ ಶುಲ್ಕಗಳು, ಖಾಸಗಿ ಆಸ್ಪತ್ರೆಗಳ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ಆರೋಗ್ಯ ಸೇವೆಗಳ ಖಾಸಗೀಕರಣವು ಅದನ್ನು ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿ ಮಾರ್ಪಾಡು ಮಾಡಿದೆ. ಹೀಗಾಗಿ ನಕಲಿ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಆಸ್ಪತ್ರೆಗಳಲ್ಲಿ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಇನ್ನು ವಿಮಾ ಮೊತ್ತದ ಲಾಭ ಪಡೆಯಲು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪಿತ್ತಕೋಶ ತೆಗೆಯುವಿಕೆ, ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ, ಆಂಜಿಯೋಪ್ಲ್ಯಾಸ್ಟಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಂತಹ ವಿಧಾನಗಳನ್ನು ಈಗ ಹಲವು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ವೈದ್ಯರ ಆದಾಯವೂ ಅವರು ಮಾಡುವ ಶಸ್ತ್ರ ಚಿಕಿತ್ಸೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಅಲ್ಲದೇ ಇದರಿಂದ ರೋಗಿಗಳು ಅನಗತ್ಯವಾಗ ಶಸ್ತ್ರ ಚಿಕಿತ್ಸೆಗಳಿಗೆ ಒಳಪಡುತ್ತಿದ್ದಾರೆ ಎಂದು ಹೇಳಿದರು.