Mysore
26
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಮಧ್ಯ ಪ್ರಾಚ್ಯ ಬಿಕ್ಕಟ್ಟು | ವಿದೇಶಾಂಗ ನೀತಿ ಬದಲಿಸಲು ಖರ್ಗೆ ಆಗ್ರಹ

mallikharjuna kharge

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಎಲ್‌ಪಿಜಿ ಸಂಕಷ್ಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಮಾಡಿ ಇತರೆ ದೇಶಗಳಿಂದ ಅನಿಲ ಆಮದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗ್ಯಾಸ್ ಲಭ್ಯವಿಲ್ಲದಿದ್ದರೂ ಇದೆ ಎಂದು ಹೇಳುವುದು ಸರಿಯಲ್ಲ. ತಪ್ಪು ಇದ್ದರೆ ಅದನ್ನು ಸರಿಪಡಿಸಬೇಕು. ಇದು ಒಂದು ಗಂಭೀರ ಸಂಕಷ್ಟವಾಗಿದ್ದು, ಸರಿಯಾಗಿ ನಿರ್ವಹಿಸದಿದ್ದರೆ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ಗ್ಯಾಸ್ ಕೊರತೆಯಿಂದ ಸಣ್ಣ ಹೋಟೆಲ್‌ಗಳು ಮತ್ತು ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀಳುತ್ತಿದೆ. ಮುಂದುವರಿದರೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯ ಯುದ್ಧ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಎಲ್‌ಪಿಜಿ ಕೊರತೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ ಈಗಲೇ ಇತರೆ ದೇಶಗಳೊಂದಿಗೆ ಮಾತುಕತೆ ನಡೆಸಿ, ಅನಿಲ ಖರೀದಿ ಮಾಡುವ ಹೊಸ ಮಾರ್ಗಗಳನ್ನು ಹುಡುಕಬೇಕು ಎಂದು ಸಲಹೆ ನೀಡಿದರು.

ಅದಕ್ಕಾಗಿಯೇ ನಿಯಮ 176 ರ ಅಡಿಯಲ್ಲಿ ಚರ್ಚಿಸಲು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ನಾನು ಸಮಯ ಕೋರಿದ್ದೆ. ಇದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಸಂಪೂರ್ಣ ಸದನದಲ್ಲಿ ಚರ್ಚೆ ನಡೆದರೆ ಎಲ್ಲರ ಅಭಿಪ್ರಾಯ ಸಿಗುತ್ತಿತ್ತು. ಆದರೆ, ಈ ನಿಯಮಕ್ಕೆ ಗೌರವ ನೀಡಲಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:
error: Content is protected !!