ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಪಾಕಿಸ್ತಾನ ಪ್ರಧಾನಿ ಜೊತೆ ಕುಳಿತು ವೀಕ್ಷಿಸುವ ಮೂಲಕ ಉಭಯ ದೇಶಗಳ ನಡುವೆ ಹಳಸಿದ್ದ ಕ್ರಿಕೆಟ್ ಸಂಬಂಧಕ್ಕೆ ಮತ್ತೆ ಜೀವ ತುಂಬಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ಎಂದರೆ ಎರಡು ದೇಶದ ಅಭಿಮಾನಿಗಳಿಗೆ ಭಾವನಾತ್ಮಕ ವಿಚಾರ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವೆ ರಾಜಕೀಯ ವಿಚಾರ ತಲೆದೂರಿ ಐಸಿಸಿ, ಏಷ್ಯಾಕಪ್ನಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಸುಧಾರಣೆಯಾಗಿತ್ತು.
2008 ರಲ್ಲಿ ಮುಂಬೈ ದಾಳಿ ಸಂಭವಿಸಿತ್ತು. ಆ ದಾಳಿಯ ನಂತರ ಎರಡು ದೇಶಗಳ ನಡುವೆ ಕ್ರಿಕೆಟ್ ಸಂಬಂಧ ಹಳಸಿತ್ತು. ಈಗ ಎರಡು ದೇಶಗಳ ನಡುವೆ ಇರುವ ವೈರತ್ವದ ಹಾಗೇಯೇ ಹಾಗಲೂ ಸಹ ದ್ವೇಷದ ಭಾವನೆ ಉಭಯ ದೇಶಗಳಲ್ಲಿತ್ತು. ಈ ದ್ವೇಷವನ್ನು ಹೋಗಲಾಡಿಸಿ ಎರಡು ದೇಶಗಳ ಕ್ರಿಕೆಟ್ ಸಂಬಂಧಕ್ಕೆ ಮರುಜೀವ ತುಂಬಿದ್ದರು.
2011ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತದ ಜೊತೆ ಶ್ರೀಲಂಕಾ, ಬಾಂಗ್ಲಾದೇಶ ದೇಶಗಳು ಅತಿಥ್ಯ ವಹಿಸಿದ್ದವು. ಈ ಸಂದರ್ಭದಲ್ಲಿ ಪಾಕ್ ಪ್ರಧಾನಿ ಯೂಸಫ್ ಗಿಲಾನಿ ಅವರಿಗೆ ಆಹ್ವಾನ ನೀಡಿ ಪಂದ್ಯ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದರು.
ಮೊಹಾಲಿಯಲ್ಲಿ ಎರಡು ದೇಶಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಬ್ಬರು ನಾಯಕರು ಎರಡು ತಂಡದ ಆಟಗಾರರಿಗೆ ಕೈ ಕುಲುಕಿ ಶುಭ ಹಾರೈಸಿ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಿದ್ದರು.
ನಂತರ 2012ರಲ್ಲಿ ಎರಡು ದೇಶಗಳ ನಡುವೆ ದ್ವಿಪಕ್ಷಿಯ ಸರಣಿ ಆಯೋಜಿಸುವಲ್ಲಿ ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕ್ ಜಯಿಸಿದರೆ, 2 ಪಂದ್ಯಗಳ ಟಿ20 ಸರಣಿ ಸಮಬಲಗೊಂಡಿತ್ತು. ಇದೇ ಎರಡು ದೇಶಗಳ ನಡುವಿನ ಕೊನೆಯ ಸರಣಿಯಾಗಿದೆ.





