ಹೊಸದಿಲ್ಲಿ : ಇರಾನ್-ಇಸ್ರೇಲ್-ಅಮೆರಿಕಾ ನಡುವೆ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಎಲ್ಪಿಜಿ (ಅಡುಗೆ ಗ್ಯಾಸ್) ಸರಬರಾಜುವಿನಲ್ಲಿ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದಾರೆ.
ಅಮೆರಿಕ, ಇಸ್ರೇಲ್ ಒಳಗೊಂಡ ಮಿಲಿಟರಿ ಕ್ರಮಗಳು ಮತ್ತು ಟೆಹ್ರಾನ್ನ ಪ್ರತೀಕಾರದ ದಾಳಿಗಳ ನಂತರ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಈ ಬಿಕ್ಕಟ್ಟು ಉಂಟಾಗಿದೆ. ಈ ಸಮುದ್ರ ಮಾರ್ಗವು ಭಾರತದ ಇಂಧನ ಭದ್ರತೆಗೆ ಅತ್ಯಗತ್ಯವಾಗಿದೆ. ದೇಶವು ತನ್ನ ಒಟ್ಟು ಎಲ್ಪಿಜಿ ಅವಶ್ಯಕತೆಗಳಲ್ಲಿ ಶೇ. 62 ರಷ್ಟು ಆಮದು ಮಾಡಿಕೊಳ್ಳುತ್ತದೆ. ಇದೀಗ ಹಾರ್ಮುಜ್ ಜಲಸಂಧಿ ಮೂಲಕ ಬರುವ ಎಲ್ಪಿಜಿ ಆಮದಿಗೆ ತೀವ್ರ ಅಡೆತಡೆಯಾಗುತ್ತಿರುವುದರಿಂದ ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ ಸೇರಿದಂತೆ ಹಲವು ಮಹಾನಗರಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ತೀವ್ರವಾಗಿದೆ. ಹೋಟೆಲ್, ರೆಸ್ಟೋರೆಂಟ್ಗಳು ಮುಚ್ಚುವ ಆತಂಕ ವ್ಯಕ್ತವಾಗಿದೆ.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು
ಸರ್ಕಾರವು ಎಸೆನ್ಷಿಯಲ್ ಕಮೋಡಿಟೀಸ್ ಆಕ್ಟ್ ಅಡಿಯಲ್ಲಿ ಎಲ್ಲಾ ರಿಫೈನರಿಗಳಿಗೆ ಎಲ್ಪಿಜಿ ಉತ್ಪಾದನೆ ಹೆಚ್ಚಿಸುವಂತೆ ಆದೇಶ ಹೊರಡಿಸಿದೆ. ಪೆಟ್ರೋಕೆಮಿಕಲ್ ಉತ್ಪಾದನೆಯಿಂದ ಹೈಡ್ರೋಕಾರ್ಬನ್ ಸ್ಟ್ರೀಮ್ಗಳನ್ನು ಎಲ್ಪಿಜಿ ಪೂಲ್ಗೆ ವರ್ಗಾಯಿಸಲಾಗುತ್ತಿದೆ. ದೇಶೀಯ ಬಳಕೆಗೆ (87%) ಪ್ರಾಥಮಿಕತೆ ನೀಡಲಾಗಿದ್ದು, ವಾಣಿಜ್ಯ ಬಳಕೆಗೆ (13%) ಆಮದು ಎಲ್ಪಿಜಿ ನಿರ್ಬಂಧಿಸಲಾಗಿದೆ. ಆಸ್ಪತ್ರೆ, ಶಾಲೆಗಳಂತಹ ಅಗತ್ಯ ಸಂಸ್ಥೆಗಳಿಗೆ ಮಾತ್ರ ಸರಬರಾಜು ಮುಂದುವರಿಸಲಾಗುತ್ತಿದೆ.
ದೇಶೀಯ ಸಿಲಿಂಡರ್ ಬುಕಿಂಗ್ ಅವಧಿಯನ್ನು 21 ದಿನದಿಂದ 25 ದಿನಕ್ಕೆ ಹೆಚ್ಚಿಸಿ ಹೂರ್ಡಿಂಗ್ ತಡೆಯಲಾಗಿದೆ. ಹೋಟೆಲ್-ರೆಸ್ಟೋರೆಂಟ್ಗಳ ಅರ್ಜಿಗಳನ್ನು ಪರಿಶೀಲಿಸಲು ಮೂವರು ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳ ವಿಶೇಷ ಸಮಿತಿಯನ್ನು ರಚಿಸಲಾಗಿದೆ.
ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಉದ್ಭವಿಸುತ್ತಿರುವ ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತು ಶಕ್ತಿ ಮಾರುಕಟ್ಟೆ ಸವಾಲುಗಳ ಬಗ್ಗೆ ಹೇಳಿದ್ದಾರೆ. ಸಂಘರ್ಷದಿಂದ ಪ್ರಭಾವಿತವಾಗದ ಮಾರ್ಗಗಳ ಮೂಲಕ ಭಾರತಕ್ಕೆ ಅವಿರತ ಪ್ರಯತ್ನ ನಡೆಯುತ್ತಿದೆ ಮತ್ತು ನಾಗರಿಕರಿಗೆ ಗ್ಯಾಸ್ ಲಭ್ಯತೆಯನ್ನು ಖಚಿತಪಡಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.




