Mysore
20
overcast clouds
Light
Dark

ಲೋಕಸಭೆ ಫಲಿತಾಂಶ ಭಾರತ ಜೋಡೋ ಯಾತ್ರೆಯ ಫಲ: ಖರ್ಗೆ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಇಂದು(ಜೂ.8) ದೆಹಲಿಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಹಾಗೂ ಮುಂದಿನ ಕಾರ್ಯತಂತ್ರಗಳನ್ನು ಕುರಿತು ಚರ್ಚಿಸಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ದೇಶದ ಲಕ್ಷಂತರ ಜನರ ಅಚಲ ನಿರ್ಧಾರದ ಬಗ್ಗೆ ಕೃತಜ್ಞತೆಗಳನ್ನು ಸಲ್ಲಿಸಿ ಮಾತು ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಸ್ತುತ ಲೋಕಸಭಾ ಚುನಾವಣೆಯ ಫಲಿತಾಂಶ ದೇಶ ವಿಭಜನೆ ಮತ್ತು ದ್ವೇಷ ಬಿತ್ತುವವರಿಗೆ ನೀಡಿದ ಜನಾದೇಶವಾಗಿದೆ. ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸ ಬೇಕು ಎಂದು ಕರೆ ಕೊಟ್ಟಿದ್ದಾರೆ.

ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂಬುದನ್ನು ಜನತೆ ತೋರಿಸಿಕೊಟ್ಟಿದ್ದಾರೆ. ನಾವು ಸಂಘಟಿತರಾಗಿ ಹೋರಾಟ ನಡೆಸಿದರೆ ಎಂತಹ ವಿಭಜಕ ಶಕ್ತಿಗಳನ್ನು ಮಣಿಸುವ ಶಕ್ತಿ ಇದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ. ನಾವು ಇನ್ನಷ್ಟು ಒಗ್ಗಟ್ಟಿನಿಂದ ಶ್ರಮ ಹಾಕಿದ್ದರೆ ನಮಗೆ ಮತ್ತಷ್ಟು ಸ್ಥಾನಗಳು ಬರುತ್ತಿದ್ದವು. ಶೇಕಡವಾರು ಮತದಾನದಲ್ಲಿ ನಾವು ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಮಣಿಪುರದಲ್ಲಿ 2 ಸ್ಥಾನ, ನಾಗಲ್ಯಾಂಡ್ ಅಸ್ಸಾಂ, ಮೇಘಾಲಯದಲ್ಲಿ ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. ಅಷ್ಟೇ ಏಕೆ ಮಹಾರಾಷ್ಟ್ರದಲ್ಲೂ ಆಡಳಿತ ಪಕ್ಷವನ್ನು ಮೆಟ್ಟಿ ನಾವು ದೊಡ್ಡ ಪಕ್ಷವಾಗಿ ಹೊರಹೊಮಿದ್ದೇವೆ. ಪ್ರಜಾಪ್ರಭುತ್ವದ ಉಳಿವು, ಸಂವಿಧಾನ ರಕ್ಷಣೆಗಾಗಿ ಎಲ್ಲ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಇದು ಬರುವ ದಿನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟವಾದ ಇಂಡಿಯಾ ಬಣಕ್ಕೆ ಶುಭದಾಯಕದ ಮುನ್ಸೂಚನೆ ಎಂದು ಖರ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ್‌ ಜೋಡೋ ಯಾತ್ರೆಯ ಪ್ರಭಾವವನ್ನು ಎತ್ತಿ ಹಿಡಿದ ಖರ್ಗೆ ಅವರು, ಯಾತ್ರೆ ನಡೆದ ಸ್ಥಳಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಿಸಿದೆ. ಸಂವಿಧಾನ, ಆರ್ಥಿಕ ಸಮಾನತೆ, ನಿರುದ್ಯೋಗ ಸಮಸ್ಯೆಗಳನ್ನು ಎತ್ತಿ ದೇಶದ ಜನತೆಗೆ ರಾಹುಲ್‌ ಅವರು ಅರಿವು ಮೂಡಿಸಿದ್ದಾರೆ ಎಂದು ರಾಹುಲ್‌ ಗಾಂಧಿಯನ್ನು ಅಭಿನಂಧಿಸಿದರು.

ಕೇಂದ್ರದಲ್ಲಿ ಕಳೆದ 10 ವರ್ಷಗಳ ಕಾಲ ಅಧಿಕಾರ ನಡೆಸಿದ ನರೇಂದ್ರಮೋದಿ ಸರ್ಕಾರವನ್ನು ಜನತೆ ಸಾರಸಗಾಟಾಗಿ ತಿರಸ್ಕರಿಸಿದ್ದಾರೆ. ಆಡಳಿತ ಪಕ್ಷದ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ವಿರೋಧಿ ಧೋರಣೆಗಳಿಗಾಗಿ ಜನತೆ ನೀಡಿರುವ ತೀರ್ಪನ್ನು ನಾವು ವಿನಮ್ರವಾಗಿ ಗೌರವಿಸುತ್ತೇವೆ ಎಂದ ಅವರು ಎಸ್ಸಿ-ಎಸ್ಟಿ , ಓಬಿಸಿ, ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕಡೆಯೂ ನಾವು ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಕಾಂಗ್ರೆಸ್ ಮೇಲಿದೆ. ಕಾರ್ಯಕರ್ತರು ಇನ್ನಷ್ಟು ಶ್ರಮ ವಹಿಸಬೇಕು ಎಂದು ಕರೆ ಕೊಟ್ಟರು.