Mysore
19
overcast clouds
Light
Dark

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲಿದೆ: ವಿ.ಸೋಮಣ್ಣ

ಬೆಂಗಳೂರು: ರಾಜ್ಯದಲ್ಲಿ ಸುಮಾರು 742 ಕಿ.ಮೀ. ರಷ್ಟು ವ್ಯಾಪ್ತಿಯನ್ನು ಹೊಂದಿರುವ ಕೊಂಕಣ ರೈಲ್ವೆ ಕುರಿತು ಕೇಂದ್ರ ರೈಲ್ವೆ ಖಾತೆಯ ಸಚಿವ ವಿ.ಸೋಮಣ್ಣ ಪ್ರಮುಖ ಮಾಹಿತಿ ನೀಡಿದ್ದಾರೆ. ಹೌದು ಕೊಂಕಣ ರೈಲ್ವೆ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲಿದೆ ಎಂಬುದನ್ನು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಪುಣೆ-ಹುಬ್ಬಳ್ಳಿ ನಡುವೆ ವಂದೇ ಭಾರತ್‌ ರೈಲ್ವೆಗೆ ಚಾಲನೆ ನೀಡಿದ್ದು, ಆ ರೈಲು ಬೆಳಗಾವಿಗೆ ಬಂದ ಸಂದರ್ಭ ಅದನ್ನು ಸ್ವಾಗತಿಸಿದ ಕೇಂದ್ರ ರೈಲ್ವೆ ಖಾತೆ ವಿ.ಸೋಮಣ್ಣ ಮಾತನಾಡಿ, ಕೇಂದ್ರ ಸರ್ಕಾರ ಸಾರ್ಜನಿಕರಿಗಾಗಿ ರೈಲ್ವೆ ಸೇವೆಗಳನ್ನು ಸುಧಾರಿಸಲು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗಳಿಸಲು ಈಗಾಗಲೇ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಕೊಂಕಣ ರೈಲ್ವೆ ಸಂಪರ್ಕ ಮಹಾರಾಷ್ಟ್ರದಿಂದ ಕೇರಳದವರೆಗೆ ವ್ಯಾಪಿಸಿದ್ದು, ನಮ್ಮ ರಾಜ್ಯದಲ್ಲಿ ಸುಮಾರು 742 ಕಿ.ಮೀ. ನಷ್ಟು ಸಂಚಾರವನ್ನು ಕಲ್ಪಿಸಿದೆ. ಅಲ್ಲದೆ ಕೊಂಕಣ ಭಾಗದ ಜನರು ಪ್ರಯಾಣಿಸಲು ಮತ್ತಷ್ಟು ಸೇವೆಗಳನ್ನು ಒದಗಿಸುವ ಅವಶ್ಯಕತೆ ಇದೆ. ಹೀಗಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಕುರಿತು, ಈ ಸೇವೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ವಿಲೀನ ವಿಚಾರ ಕುರಿತು ಅನ್ಯ ರಾಜ್ಯಗಳೊಂದಿಗೆ ಚರ್ಚೆ: ವಿ.ಸೋಮಣ್ಣ

ಕೊಂಕಣ ರೈಲ್ವೆ ವಿಲೀನ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲದೆ ಈ ವಿಚಾರವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ, ವಿಲೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ರಾಜ್ಯಗಳಲ್ಲಿ ಈ ಹಿಂದೆ ಶೇ.50ರಷ್ಟು ಭಾಗದ ಕೊಡುಗೆಯೊಂದಿಗೆ ರಾಜ್ಯದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ ಪ್ರಸ್ತುತವಾಗಿ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರವೇ ರೈಲ್ವೆಯ ಎಲ್ಲಾ ವೆಚ್ಚವನ್ನು ಭರಿಸಲು ತೀರ್ಮಾನಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಬಾಕಿ ಇರುವ ಯೋಜನೆಗಳು ಶೀಘ್ರವೇ ಪೂರ್ಣವಾಗಲಿವೆ
ಮುಂದಿನ ಮೂರು ವರ್ಷಗಳಲ್ಲಿ ಧಾರವಾಡ-ಬೆಳಗಾವಿ ನಡುವೆ ನೇರ ಸಂಪರ್ಕದ ರೈಲ್ವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಬಾಕಿ ಇರುವ ಯೋಜನೆಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ರೈಲ್ವೆ ಇಲಾಖೆಗೆ ಮುಂದಿನ ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.