Mysore
20
overcast clouds
Light
Dark

ಜೂನ್.‌25ರಂದು ಸಂವಿಧಾನ್‌ ಹತ್ಯಾ ದಿವಸ್‌ ಆಚರಿಸಲು ಕೇಂದ್ರ ನಿರ್ಧಾರ: ಜೂನ್.‌4ರಂದು ಮೋದಿ ಮುಕ್ತ ದಿವಸ್‌ ಎಂದ ಕಾಂಗ್ರೆಸ್‌

ನವದೆಹಲಿ: ಜೂನ್.‌25ರಂದು ಸಂವಿಧಾನ್‌ ಹತ್ಯಾ ದಿವಸ್‌ ಎಂದು ಆಚರಿಸುವ ಕೇಂದ್ರದ ನಿರ್ಧಾರಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಜೂನ್.‌4ನ್ನು ಮೋದಿ ಮುಕ್ತಿ ದಿವಸ್‌ ಎಂದು ಆಚರಿಸಲು ಹೇಳಿದೆ.

ಜೂನ್‌.4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಸರಳ ಬಹುಮತಕ್ಕೆ 32 ಸ್ಥಾನಗಳ ಕೊರತೆಯಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸತತ ಮೂರನೇ ಬಾರಿ ಸರ್ಕಾರವನ್ನು ರಚಿಸಿದರು. ಈ ರೀತಿ ಸೀಟುಗಳನ್ನು ಕಳೆದುಕೊಂಡಿರುವುದು ಪ್ರಧಾನಿ ಮೋದಿಯವರ ನೈತಿಕ ಸೋಲು ಎಂದು ವಿರೋಧ ಪಕ್ಷಗಳ ಇಂಡಿಯಾ ಬಣ ಹೇಳಿದೆ.

ಸಂವಿಧಾನ್‌ ಹತ್ಯಾ ದಿವಸ್‌ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಕೇಂದ್ರದ ಈ ನಡೆ ಹೆಡ್ ಲೈನ್‌ ಹಪಾಹಪಿಯ ಕಸರತ್ತು ಎಂದು ಹೇಳಿದ್ದಾರೆ.

ಜೈವಿಕ ಅಲ್ಲದ ಪ್ರಧಾನಮಂತ್ರಿಯ ಬೂಟಾಟಿಕೆಯಲ್ಲಿ ಮತ್ತೊಂದು ಹೆಡ್‌ಲೈನ್‌ ಹಪಾಹಪಿ ಕಸರತ್ತು. ಮೊದಲು ಹತ್ತು ವರ್ಷಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಅವರಿಗೆ 2024 ಜೂನ್‌ 4ರಂದು ಭಾರತದ ಜನರು ನಿರ್ಣಾಯಕ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ನೀಡಿದ್ದಾರೆ. ಆ ದಿನವನ್ನು ಇತಿಹಾಸದಲ್ಲಿ ಮೋದಿ ಮುಕ್ತಿ ದಿವಸ್‌ ಎಂದು ನೆನಪಿಸಲಾಗುವುದು ಎಂದು ಹೇಳಿದ್ದಾರೆ.

ಇವರು ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತ ದಾಳಿಗೆ ಒಳಪಡಿಸಿದ ಜೈವಿಕವಲ್ಲದ ಪ್ರಧಾನಿ. ಇವರು ಮನುಸ್ಮೃತಿಯಿಂದ ಸ್ಪೂರ್ತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ 1949ರ ನವೆಂಬರ್‌ನಲ್ಲಿ ಭಾರತದ ಸಂವಿಧಾನವನ್ನು ತಿರಸ್ಕರಿಸಿದ ಸೈದ್ಧಾಂತಿಕ ಪರಿವಾರದ ಜೈವಿಕವಲ್ಲದ ಪ್ರಧಾನಿ. ಇವರು ಜೈವಿಕವಲ್ಲದ ಪ್ರಧಾನಿಯಾಗಿದ್ದು, ಅವರಿಗೆ ಪ್ರಜಾಪ್ರಭುತ್ವ ಎಂದರೆ ಡೆಮೊ-ಕುರ್ಸಿ ಮಾತ್ರ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.