ನವದೆಹಲಿ: ದಶಕಗಳಿಗೆ ಒಮ್ಮೆ ಮಾಡುವ ಜನಗಣತಿಯನ್ನು ವಿಳಂಬ ಮಾಡಿದರೆ ಅನೇಕ ಸಾಮಾಜಿಕ ನೀತಿಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 2021 ರಿಂದ ಜನಗಣತಿ ಬಾಕಿಯಾಗಿಯೇ ಉಳಿದಿದೆ. ಈ ವರ್ಷ ನಡೆಸುವುದೂ ಅನುಮಾನವಾಗಿದೆ. ದೇಶದಲ್ಲಿ ಜನನ ಮತ್ತು ಮರಣಗಳ ಕುರಿತು ಕನಿಷ್ಠ ಎರಡು ಪ್ರಮುಖ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯವು ಕಳೆದ ಐದು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಮತ್ತು ಆಹಾರ ಭದ್ರತೆಯ ಹಕ್ಕುಗಳು ಸೇರಿದಂತೆ ಅನೇಕ ಸಾಮಾಜಿಕ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಹಾನಿಯುಂಟು ಮಾಡುತ್ತಿದೆ ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಜನಗಣತಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಿರಾಸೆಯನ್ನುಂಟು ಮಾಡಿದೆ. ಅಲ್ಲದೇ ಜನಗಣತಿಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸರ್ಕಾರ ವಿಫಲವಾಗಿರುವುದು ರಾಜ್ಯದ ಆಡಳಿತಾತ್ಮಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಹೇಳಿದ್ದಾರೆ.





