ಬೆಂಗಳೂರು: ಭಾರತೀಯ ರೈಲ್ವೆ ಮಂಡಳಿ ಹಾಗೂ ಇಂಡಿಯನ್ ರೈಲ್ವೇಸ್ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್(ಐಆರ್ಸಿಟಿಸಿ) ಜಂಟಿಯಾಗಿ ದೇಶದ 100 ರೈಲ್ವೆ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಊಟ ಮತ್ತು ನೀರು ನೀಡುವ ಕೌಂಟರ್ ಆರಂಭಿಸಿದೆ.
ಸಾರ್ವಜನಿಕರು ಬೇಸಿಗೆಯ ಬಿಸಿಲಿಗೆ ಬಸವಳಿದಿರುವ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ, ಪ್ರಮುಖ ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ ಕೋಚ್ಗಳ ಬಳಿ ಈ ಕಡಿಮೆ ದರದ ಉತ್ತಮ ಆಹಾರ ನೀಡುವ ಕೌಂಟರ್ಗಳನ್ನು ತೆರೆದಿದೆ.
ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳಲ್ಲಿ ದುಪ್ಪಟ ದರದಲ್ಲಿಯೇ ಆಹಾರ ಪದರ್ಥಾಗಳು ಇರುತ್ತದೆ. ಇದರಿಂದ ಸಾಮಾನ್ಯ ವರ್ಗದ ಜನರಿಗೆ ತೊಂದರೆಯಾಗುತ್ತಿತ್ತು. ಇದೀಗ ಸಾಮಾನ್ಯ ದರ್ಜೆಗಳಲ್ಲಿ ತೆರಳುವ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿ ಕಡಿಮೆ ದರದಲ್ಲಿ ರೈಲ್ವೆ ಮಂಡಳಿ ಗುಣಮಟ್ಟದ ಆಹಾರ ಪದರ್ಥಗಳನ್ನು ನೀಡುತ್ತಿದೆ.
ಉಪಾಹಾರ ರೂ 20, ಊಟ ರೂ 50, ನೀರು ರೂ 3(200 ಎಂ.ಎಲ್) ದರ ನಿಗದಿಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ನೀಡಲು ರೈಲ್ವೆ ಮಂಡಳಿ ಮುಂದಾಗಿದೆ.
ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳು. ನೈರುತ್ಯ ರೈಲ್ವೆ ವ್ಯಾಪ್ತಿಯ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಹಾಗೂ ಬಳ್ಳಾರಿ ರೈಲ್ವೆ ನಿಲ್ದಾಣ ಸೇರಿದಂತೆ ದೇಶಾದ್ಯಾಂತ 100 ರೈಲ್ವೆ ನಿಲ್ದಾಣಗಳ 150 ಪ್ಲಾಟ್ಫಾರಂಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.