ಕೇರಳ: ಕೇರಳ ವಯನಾಡು ಜಿಲ್ಲೆಯ ಚೂರ್ಲಮಲಾ, ಮೇಪಾಡ್ಡಿ ಸೇರಿದಂತೆ ಮೂರು ಗ್ರಾಮಗಳು ಭೂಕುಸಿತಕ್ಕೆ ತುತ್ತಾಗಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದವು.
ಈ ಭೂಕುಸಿತದಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪಿದರೆ, 200ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದರು. ಕೇರಳದಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಇನ್ನು ಭೂಕುಸಿತ ಸ್ಥಳಕ್ಕೆ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭೇಟಿ ನೀಡಿ, ಒಂದು ಕೋಟಿ ಪರಿಹಾರ ಕೂಡಾ ಘೋಷಣೆ ಮಾಡಿದ್ದರು. ಇನ್ನು ಭೂಕುಸಿತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆಯೇ ಎಂದು ಎಲ್ಲರಲ್ಲಿಯೂ ಪ್ರಶ್ನೆಗಳು ಮೂಡಿತ್ತು.
ಇದಕ್ಕೆ ಉತ್ತರ ಎಂಬಂತೆ ಇಂದು (ಶನಿವಾರ, ಆ.10) ಕೇರಳದ ವಯನಾಡಿಗೆ ಭೇಟಿ ನೀಡಿರುವ ಪ್ರಧಾನಿ ಸಂತ್ರಸ್ಥರ ಕುಟುಂಬಗಳನ್ನು ಭೇಟಿಯಾಗಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಈ ಬಗ್ಗೆ ಸಂತಾಪ ಸೂಚಿಸಿರುವ ಪ್ರಧಾನಿ, ಈ ದುರಂತದಲ್ಲಿ ನೂರಾರು ಕುಟುಂಬಗಳು ನಲುಗಿ ಹೋಗಿವೆ. ನಾವೆಲ್ಲರೂ ಅವರ ಪರವಾಗಿ ನಿಲ್ಲಬೇಕು. ದುರಂತರದಲ್ಲಿ ಪ್ರಾಣಾಪಯವಾದ ಕುಟುಂಬಗಳ ಜೊತೆ ನಿಲ್ಲಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೇರಳ ದುರಂತರದಲ್ಲಿ ಸಿಲುಕಿರುವ ಎಲ್ಲಾ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೇವೆ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಕೇರಳ ಸರ್ಕಾರದೊಂದಿಗೆ ಸದಾ ನಿಲ್ಲಲಿದೆ ಎಂದರು.
ಇದಕ್ಕು ಮೊದಲು ವಯನಾಡಿನ ಭೂಕುಸಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ಬಳಿಕ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು. ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿ, ಅಗತ್ಯ ನೆರವು ನೀಡುವ ಭರವಸೆಯನ್ನು ನರೇಂದ್ರ ಮೋದಿ ಕೇರಳ ಜನರಿಗೆ ನೀಡಿದರು.