ನವದೆಹಲಿ: ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ತನಿಖೆ ನಡೆಸಬೇಕೆಂದು ಸಂಸತ್ ಭವನದ ಮುಂದೆ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರತಿಭಟನೆ ಮೂಲಕ ಆಗ್ರಹಿಸಿದರು.
ಇಂಡಿಯಾ ಒಕ್ಕೂಟದ ಕಾಂಗ್ರೆಸ್, ಎಎಪಿ, ಆರ್ಜೆಡಿ, ಶಿವಸೇನೆ(ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಅದಾನಿ ಬಂಧನಕ್ಕೆ ಒತ್ತಾಯಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಎಪಿಯ ಸಂಜಯ್ ಸಿಂಗ್, ಆರ್ಜೆಡಿಯ ಮಿಸಾ ಭಾರತಿ ಮತ್ತು ಶಿವಸೇನೆಯ ಅರವಿಂದ್ ಸಾವಂತ್ ಅವರು ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಪ್ರತಿಭಟಿಸುವ ಮೂಲಕ ಅದಾನಿ ಬಂಧನಕ್ಕೆ ಪಟ್ಟು ಹಿಡಿದ ಘಟನೆ ನಡೆಯಿತು.
ಲಂಚ ಮತ್ತು ವಂಚನೆ ಆರೋಪದ ಮೇಲೆ ಅದಾನಿ ಗ್ರೂಪ್ ಕಂಪನಿಯ ಅಧ್ಯಕ್ಷ ಮತ್ತು ಅಧಿಕಾರಿಗಳ ಮೇಲೆ ಯುಎಸ್ ಪ್ರಾಸಿಕ್ಯೂಟರ್ಗಳು ದೂಷಿಸಿದ್ದರು. ಈಗ ಕಾಂಗ್ರೆಸ್ಗೆ ಆಡಳಿತ ಪಕ್ಷದ ವಿರುದ್ಧ ಮಾತನಾಡಲು ಹೊಸ ಅಸ್ತ್ರ ಸಿಕ್ಕಿದೆ. ಈಗ ರಾಹುಲ್ ಗಾಂಧಿ ಈ ಯುಎಸ್ನ ಆರೋಪಗಳನ್ನು ಇಟ್ಟುಕೊಂಡು ಅದಾನಿ ಗ್ರೂಪ್ ಮೇಲಿನ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.





