ಉತ್ತರ ಪ್ರದೇಶ: ಉದ್ವಿಗ್ನ ಸ್ಥಿತಿ ನೆಲೆಗೊಂಡಿರುವ ಉತ್ತರ ಪ್ರದೇಶದ ಸಂಭಲ್ಗೆ ತೆರಳಲು ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ಗಾಜಿಪುರ ಗಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರಾಹುಲ್ ಗಾಂಧಿ ಅವರು, ನಾವು ಸಂಭಲ್ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪೊಲೀಸರು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಸಂಭಲ್ಗೆ ಭೇಟಿ ನೀಡುವುದು ನನ್ನ ಹಕ್ಕು.
ಪೊಲೀಸರ ಜೊತೆ ಒಬ್ಬನೇ ತೆರಳಲು ನಾನು ಸಿದ್ಧನಿದ್ದೇನೆ. ಆದರೂ ನನಗೆ ಅವಕಾಶ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
ಕೆಲವು ದಿನಗಳ ನಂತರ ನನ್ನ ಭೇಟಿಗೆ ಅವಕಾಶ ನೀಡುವುದಾಗಿ ಹೇಳುತ್ತಾರೆ. ಆದರೆ ಇದು ಲೋಕಸಭೆ ವಿರೋಧ ಪಕ್ಷದ ನಾಯಕನ ಹಕ್ಕುಗಳಿಗೆ ವಿರುದ್ಧವಾಗಿದೆ. ಅವರು ನನಗೆ ಅವಕಾಶ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ನಾನು ಸಂಭಲ್ಗೆ ಭೇಟಿ ನೀಡಿ ಅಲ್ಲಿ ಜನರನ್ನು ಭೇಟಿ ಮಾಡಿ ಏನಾಯಿತು ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ಆದರೆ ನನ್ನ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.





