ಕೊಚ್ಚಿ: ಖಾಸಗಿ ಖನಿಜ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದ ಆರೋಪದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್ಗೆ ಸೇರಿದ ಐಟಿ ಕಂಪನಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ದೂರು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಸಮನ್ಸ್ ಹೊರಡಿಸುವ ಸಾಧ್ಯತೆಗಳಿವೆ ಎಂದೂ ಸಹ ಮೂಲಗಳು ತಿಳಿಸಿವೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ವಿಭಾಗ ಸಲ್ಲಿಸಿದ ದೂರಿನಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ದೂರಿನಲ್ಲಿ 2018-19ರ ಅವಧಿಯಲ್ಲಿ ಕೊಚ್ಚಿನ್ ಮಿನರಲ್ಸ್ ಹಾಗೂ ರುಟೈಲ್ ಲಿಮಿಟೆಡ್ ಎಂಬ ಕಂಪನಿ ಯಾವುದೇ ಸೇವೆಯನ್ನು ಪಡೆಯದಿದ್ದರೂ ಸಹ ವೀಣಾ ಒಡೆತನದ ಎಕ್ಸ್ ಲಾಜಿಕ್ ಸೆಲ್ಯೂಷನ್ಗೆ 1.72 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.





