Mysore
30
few clouds

Social Media

ಬುಧವಾರ, 11 ಮಾರ್ಚ್ 2026
Light
Dark

ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಣೆ : ರಾಹುಲ್‌ ಗಾಂಧಿ

ಹೊಸದಿಲ್ಲಿ : ಈ ಸದನವು ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ಇಡೀ ದೇಶವನ್ನು ಪ್ರತಿನಿಧಿಸುತ್ತದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ‘ರಾಜಿ ಮಾಡಿಕೊಂಡಿದ್ದಾರೆ‘ ಮತ್ತು ಅದರ ಫಲಿತಾಂಶ ಎಲ್ಲರಿಗೂ ಗೊತ್ತಿದೆ ಎಂದರು.

ವಿರೋಧ ಪಕ್ಷದ ನಾಯಕ ತನ್ನ ಮಾತುಗಳನ್ನು, ವಿಶೇಷವಾಗಿ ರಾಷ್ಟ್ರೀಯ ಭದ್ರತೆಯ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದ ಬಿಜೆಪಿಯ ರವಿಶಂಕರ್ ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಚರ್ಚೆಯ ಸಮಯದಲ್ಲಿ ನನ್ನ ಹೆಸರನ್ನು ಹಲವು ಬಾರಿ ಎತ್ತಲಾಗುತ್ತಿದೆ ಮತ್ತು ತಮ್ಮ ಬಗ್ಗೆ ‘ಕೆಟ್ಟ ವಿಷಯಗಳನ್ನು‘ ಹೇಳಲಾಗುತ್ತಿದೆ ಎಂದರು.

‘ಇಲ್ಲಿ ಚರ್ಚೆಯ ವಿಷಯ ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಸ್ಪೀಕರ್ ಪಾತ್ರದ ಬಗ್ಗೆ. ಈ ಸದನವು ಜನರ ಇಚ್ಛೆಯ ಅಭಿವ್ಯಕ್ತಿಯಾಗಿದೆ. ಈ ಸದನವು ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ; ಅದು ಇಡೀ ದೇಶವನ್ನು ಪ್ರತಿನಿಧಿಸುತ್ತದೆ‘ ಎಂದು ಹೇಳಿದರು.

ನಾವು ಪ್ರತಿ ಬಾರಿ ಮಾತನಾಡಲು ಎದ್ದಾಗಲೂ ನಮ್ಮನ್ನು ತಡೆಯಲಾಗುತ್ತದೆ. ನಾನು ಕೊನೆಯ ಬಾರಿ ಮಾತನಾಡುವಾಗ, ನಮ್ಮ ಪ್ರಧಾನಿ ಮಾಡಿಕೊಂಡ ರಾಜಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆ. ಹಲವು ಬಾರಿ, ನನ್ನನ್ನು ಮಾತನಾಡದಂತೆ ತಡೆಯಲಾಗಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ವಿರೋಧ ಪಕ್ಷದ ನಾಯಕನಿಗೆ ಚರ್ಚೆಯ ಸಮಯದಲ್ಲಿ ಮಾತನಾಡಲು ಅವಕಾಶ ನೀಡಲಾಗಿಲ್ಲ‘ ಎಂದು ರಾಹುಲ್ ಗಾಂಧಿ ಹೇಳಿದರು.

‘ನಾನು ನರವಾಣೆ ಅವರ ವಿಷಯವನ್ನು ಎತ್ತಿದೆ, ನಾನು ಎಪ್‌ಸ್ಟೀನ್ ಫೈಲ್ಸ್ ವಿಷಯವನ್ನು ಎತ್ತಿದೆ, ನಾನು ಅದಾನಿ ಅವರ ವಿಷಯವನ್ನು ಎತ್ತಿದೆ. ಆದರೆ ನನ್ನ ಧ್ವನಿ ಹತ್ತಿಕ್ಕುವ ಯತ್ನ ಮಾಡಲಾಯಿತು. ಈ ಸಮಸ್ಯೆಗಳು ಭಾರತದ ಜನರಿಗೆ ತಿಳಿಯಬೇಕು‘ ಎಂದು ಅವರು ಹೇಳಿದರು.

ಬಿರ್ಲಾ ವಿರುದ್ಧದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್, ಸ್ಪೀಕರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ನಿರ್ಣಯ, ಕೇವಲ ಒಬ್ಬ ನಾಯಕನನ್ನು ‘ತೃಪ್ತಿಗೊಳಿಸಲು‘ ಅಸ್ತ್ರವಾಗಿ ಬಳಸಬಾರದು ಎಂದರು.

ನಾಯಕನೊಬ್ಬನ ಅಹಂಕಾರದ ಫಲವಾದ ನಿರ್ಣಯದ ಬಗ್ಗೆ ಈ ಸದನವು ಚರ್ಚಿಸುತ್ತಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು.

Tags:
error: Content is protected !!