ಮುಂಬೈ : ಲಂಡನ್ನಿನಲ್ಲಿ ಇದ್ದುಕೊಂಡು ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ (ಎಫ್ಇಒ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಬದಲು, ಭಾರತಕ್ಕೆ ಬಂದು ನೇರವಾಗಿ ವಿಚಾರಣೆ ಎದುರಿಸಬೇಕು ಎಂದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಚಾಟಿ ಬೀಸಿದೆ.
2016ರಿಂದ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ಮಲ್ಯ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಗುರುತಿಸಿರುವುದು ಮತ್ತು ಎಫ್ಇಒನ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಒಟ್ಟು ಎರಡು ಅರ್ಜಿಗಳನ್ನು ದಾಖಲಿಸಿದ್ದಾರೆ. ವಂಚನೆ, ಹಣ ಅಕ್ರಮ ವರ್ಗಾವಣೆ ಸೇರಿ ಹಲವು ಪ್ರಕರಣಗಳು ಮಲ್ಯ ವಿರುದ್ಧ ಭಾರತದಲ್ಲಿ ದಾಖಲಾಗಿವೆ. ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಎ. ಅಂಖಡ್ ಅವರ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿ, ನೀವು ಭಾರತಕ್ಕೆ ಬರಲೇಬೇಕು, ಯಾವಾಗ ಬರುತ್ತೀರಿ ಎನ್ನುವುದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ಎಂದು ಮಲ್ಯಗೆ ಕಟ್ಟುನಿಟ್ಟಾಗಿ ಸೂಚಿಸಿದೆ.
ನೀವು ಭಾರತಕ್ಕೆ ಬರದಿದ್ದರೆ, ನಿಮ್ಮ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಕೋರ್ಟ್ಗೆ ಹಾಜರಾಗುವುದನ್ನು ನೀವು ಉದ್ದೇಶಪೂರ್ವಕವಾಗಿಯೇ ತಪ್ಪಿಸುತ್ತಿದ್ದೀರಿ ಎಂದು ನಾವು ಭಾವಿಸುತ್ತೇವೆ. ಸದ್ಯ ನಿಮ್ಮ ಅರ್ಜಿ ವಜಾಗೊಳಿಸುತ್ತಿಲ್ಲ, ಬದಲಿಗೆ ಇನ್ನೊಂದು ಅವಕಾಶ ಕೊಡುತ್ತಿದ್ದೇವೆ, ಆದರೆ, ಕೋರ್ಟ್ ಪ್ರಕ್ರಿಯೆಯಲ್ಲಿ ನಿಮ್ಮ ಖುದ್ದು ಹಾಜರಾತಿ ಇರಬೇಕು ಎಂದು ನ್ಯಾಯಪೀಠ ತಾಕೀತು ಮಾಡಿತು.





