ಹೊಸದಿಲ್ಲಿ : ನೂತನವಾಗಿ ನೇಮಕಗೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಬುಧವಾರ ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ವಕೀಲರು ಸ್ವಾಗತಿಸುತ್ತಿದ್ದಂತೆ ʻಜೈ ಭೀಮ್ʼ ಎಂದು ಪ್ರತಿಕ್ರಿಯಿಸಿದರು.
ಬೌದ್ಧ ಧರ್ಮವನ್ನು ಅನುಸರಿಸುವ ಮೊದಲ ಮುಖ್ಯ ನ್ಯಾಯಮೂರ್ತಿಯಾದ ಇವರು, ದಲಿತ ಸಮುದಾಯದಿಂದ ಈ ಸ್ಥಾನವನ್ನು ಅಲಂಕರಿಸುವ ಎರಡನೇ ವ್ಯಕ್ತಿಯಾಗಿದ್ದಾರೆ. ಮೊದಲನೆಯವರು ಜಸ್ಟಿಸ್ ಕೆ.ಜಿ. ಬಾಲಕೃಷ್ಣನ್ (2007-2010).
ಮುಖ್ಯ ನ್ಯಾಯಮೂರ್ತಿಗಳ ಹಿನ್ನೆಲೆ ಏನು?
ಜಸ್ಟಿಸ್ ಗವಾಯಿ ಅವರು ನವೆಂಬರ್ 24, 1960 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. ಅವರ ತಂದೆ, ದಿವಂಗತ ಆರ್.ಎಸ್. ಗವಾಯಿ ಅವರು ಬಿಹಾರ ಮತ್ತು ಕೇರಳದ ಮಾಜಿ ರಾಜ್ಯಪಾಲರಾಗಿದ್ದರು. 2003 ರಲ್ಲಿ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ನವೆಂಬರ್ 12, 2005 ರಂದು ಖಾಯಂ ನ್ಯಾಯಾಧೀಶರಾದರು. ಅವರು 15 ವರ್ಷಗಳಿಗೂ ಹೆಚ್ಚು ಕಾಲ ಮುಂಬೈ, ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡರು.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು 2016 ರ ನೋಟು ಅಮಾನ್ಯೀಕರಣ ಯೋಜನೆಯನ್ನು ಎತ್ತಿಹಿಡಿದು, ಕರೆನ್ಸಿ ಅಮಾನ್ಯಗೊಳಿಸುವ ಸರ್ಕಾರದ ಅಧಿಕಾರವನ್ನು ಸಮರ್ಥಿಸಿಕೊಂಡಿದ್ದರು. ಮನೀಷ್ ಸಿಸೋಡಿಯಾ ಜಾಮೀನು ಕೇಸ್ನಲ್ಲಿ ನ್ಯಾಯಮೂರ್ತಿ ಗವಾಯಿ ಅವರು ತೀರ್ಪನ್ನು ನೀಡಿದ್ದರು. ಇದು ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದರು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ ಪೀಠದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಇನ್ನು ಇತ್ತೀಚೆಗೆ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪರಿಶೀಲಿಸಿದ ಪೀಠದಲ್ಲಿ ಗವಾಯಿ ಕೂಡ ಇದ್ದರು.
ಜಸ್ಟಿಸ್ ಗವಾಯಿ ಅವರು 1960ರ ನವೆಂಬರ್ 24ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. ಅವರ ತಂದೆ ಆರ್.ಎಸ್. ಗವಾಯಿ ಅವರು ಅಂಬೇಡ್ಕರವಾದಿ ನಾಯಕ, ಸಂಸದ ಹಾಗೂ ಬಿಹಾರ ಮತ್ತು ಕೇರಳ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದರು. ಅಂಬೇಡ್ಕರ್ ಅವರ ತತ್ವಗಳಿಂದ ಪ್ರೇರಿತವಾದ ಅವರ ಕುಟುಂಬ ಬೌದ್ಧ ಧರ್ಮವನ್ನು ಅನುಸರಿಸುತ್ತಿದೆ.
ಶಿಕ್ಷಣ ಮತ್ತು ವೃತ್ತಿ ಜೀವನ:
ಜಸ್ಟಿಸ್ ಗವಾಯಿ ಅವರು ನಾಗ್ಪುರ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಲ್ಎಲ್ಬಿ ಪದವಿಗಳನ್ನು ಪಡೆದಿದ್ದಾರೆ. 1985ರ ಮಾರ್ಚ್ 16ರಂದು ವಕೀಲರಾಗಿ ನೋಂದಾಯಿತರಾದ ಅವರು, ಹಿರಿಯ ವಕೀಲ ರಾಜಾ ಎಸ್. ಭೋನ್ಸಲೇ ಅವರೊಂದಿಗೆ ಕಾರ್ಯನಿರ್ವಹಿಸಿದರು. ಅವರು ಬಾಂಬೆ ಹೈಕೋರ್ಟ್ನ ನಾಗ್ಪುರ ಬೆಂಚ್ನಲ್ಲಿ ಮುಖ್ಯವಾಗಿ ಸಂವಿಧಾನ ಮತ್ತು ಆಡಳಿತಾತ್ಮಕ ಕಾನೂನುಗಳಲ್ಲಿ ಪರಿಣತಿ ಹೊಂದಿದ್ದರು.
ಪ್ರಮುಖ ತೀರ್ಪುಗಳು:
2016ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಸಮರ್ಥಿಸುವ ತೀರ್ಪು (2023)
ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ `ಕ್ರೀಮಿ ಲೇಯರ್’ ನಿಯಮವನ್ನು ವಿಸ್ತರಿಸುವ ತೀರ್ಪು (2024)
ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಮ್ಸಿಟಿಯಲ್ ಎವಿಡೆನ್ಸ್ ಅನ್ನು ಮಾನ್ಯಗೊಳಿಸುವ ತೀರ್ಪು
ಜಸ್ಟಿಸ್ ಗವಾಯಿ ಅವರ ನೇಮಕಾತಿ ಭಾರತೀಯ ನ್ಯಾಯಾಂಗದಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರತಿನಿಧಿತ್ವದ ದೃಷ್ಟಿಯಿಂದ ಮಹತ್ವಪೂರ್ಣ ಹೆಜ್ಜೆಯಾಗಿದೆ.





