ಭೋಪಾಲ್ : ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿದೆ.
ಭಾರತದ ಸ್ವಚ್ಛ ನಗರ ಎಂದು ಕರೆಯಲ್ಪಡುವ ಭೋಪಾಲ್ನಲ್ಲಿ ಇಂತಹ ದುರದೃಷ್ಟಕರ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಭಗೀರಥಪುರ ಪೊಲೀಸ್ ಹೊರಠಾಣೆ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿಯ ಮುಖ್ಯ ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಕಲುಷಿತ ನೀರು ಸೋರಿಕೆಯಾಗಿ ಮಾಲಿನ್ಯ ಉಂಟಾಗಿದೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಈ ಬಿರುಕು ಮೂಲಕ ಕೊಳಚೆ ನೀರು ಕುಡಿಯುವ ನೀರಿನ ಮಾರ್ಗವನ್ನು ಪ್ರವೇಶಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಸೋರಿಕೆಯಿಂದಾಗಿ ಮಾಲಿನ್ಯದ ಪುರಾವೆಗಳು ಕಂಡುಬಂದಿವೆ ಎಂದು ದೃಢಪಡಿಸಿದರು ಮತ್ತು ಅಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.
ನಗರಾಡಳಿತ ಸಚಿವ ಕೈಲಾಶ್ ವಿಜಯವರ್ಗೀಯಾ ಅವರು ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣವಾಗುವುದು ಸಂಭವನೀಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ವರದಿಗಳು ಇದನ್ನು ದೃಢಪಡಿಸಿವೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಮಾಧವ್ ಹಸಾನಿ ಅವರು ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷಿಸಿದ ನೀರಿನ ಮಾದರಿಗಳು ಭಾಗೀರಥಪುರದ ನಿವಾಸಿಗಳು ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಕಿಡಿ
ಕಲುಷಿತ ನೀರು ಕುಡಿದು 11 ಮಂದಿ ಮೃತಪಟ್ಟಿರುವ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ಕೆಮ್ಮಿನ ಸಿರಪ್ನಿಂದ ಹಲವರು ಸತ್ತರು. ಬಳಿಕ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ಶಿಶುಗಳ ಸಾವು ಸಂಭವಿಸಿತು. ಇದೀಗ ಕೊಳಚೆ ನೀರು ಕುಡಿದು ಜನರು ಸಾಯುತ್ತಿದ್ದಾರೆ. ಹೀಗಿದ್ದರೂ ಬಡವರ ಸಾವಿಗೆ ಪ್ರಧಾನಿ ಮೋದಿ ಸದಾ ಮೌನ ವಹಿಸುತ್ತಾರೆ ಎಂದು ಕುಟುಕಿದ್ದಾರೆ.




