ಮೈಸೂರು : ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಮಂಗಳವಾರ ಕುರುಬರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟದವರೆಗೆ ನಡೆಯಬೇಕಿದ್ದ ಎರಡು ಪ್ರತ್ಯೇಕ ರ್ಯಾಲಿಗಳಿಗೆ ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರದ ಹಿಂದೂ ವಿರೋಧಿ ನಿಲುವನ್ನು ಹೊಂದಿದೆ ಎಂದು ಹಾಗೂ ಈ ವರ್ಷದ ದಸರಾ ಉತ್ಸವವನ್ನು ಉದ್ಘಾಟಿಸಲು ಹಿರಿಯ ಕನ್ನಡ ಬರಹಗಾರ್ತಿ ಮತ್ತು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ಮೈಸೂರು ಜಿಲ್ಲಾ ಘಟಕವು ಮಂಗಳವಾರ ಬೆಳಿಗ್ಗೆ ೭.೩೦ ಕ್ಕೆ ಪಾದಯಾತ್ರೆಯನ್ನು ಯೋಜಿಸಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ದಲಿತ ಮಹಾಸಭಾವು ಬಾನು ಮುಷ್ತಾಕ್ ಅವರನ್ನು ಬೆಂಬಲಿಸಿ ಮೆರವಣಿಗೆಯನ್ನು ಘೋಷಿಸಿತ್ತು. ಎರಡೂ ರ್ಯಾಲಿಗಳು ಸೆ.೯ ರಂದು ಬೆಳಿಗ್ಗೆ ೭.೩೦ ಕ್ಕೆ ನಿಗದಿಯಾಗಿದ್ದವು, ಅವುಗಳ ಆರಂಭದ ಸ್ಥಳ ಮತ್ತು ಮಾರ್ಗ ಒಂದೇ ಆಗಿತ್ತು.
ಈ ಸಂಬಂದ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಎರಡೂ ಕಡೆಯವರ ರ್ಯಾಲಿಗಳಿಗೆ ಅನುಮತಿ ನಿರಾಕರಿಸಲಾಗಿದೆ. ಕುರುಬರಹಳ್ಳಿ ವೃತ್ತದಲ್ಲಿ ಮತ್ತು ಪ್ರಸ್ತಾವಿತ ರ್ಯಾಲಿ ಮಾರ್ಗದಲ್ಲಿ ಭದ್ರತೆಗಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದು. ಯಾವುದೇ ಗುಂಪು ತಮ್ಮ ಉದ್ದೇಶಿತ ಮೆರವಣಿಗೆಗಳನ್ನು ನಡೆಸಲು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುರುಬರಹಳ್ಳಿ ವೃತ್ತ ಮತ್ತು ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಮಂಗಳವಾರ ಜನರು ಗುಂಪುಗೂಡದಂತೆ ಎಚ್ಚರಿಕೆ ನಿಡಿರುವ ಅವರು, ಗಲಭೆಗಳನ್ನು ನಡೆಸಲು ಮುಂದಾದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.





