Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯುವ ಜನರ ಹುಚ್ಚೆಬ್ಬಿಸಿ ಕುಣಿಸಿದ ಯುವ ದಸರಾ: ಮೈ ಜುಮ್‌ ಎನಿಸಿದ ಹಾಡು-ನೃತ್ಯ

ಯಶಸ್ವಿಗೊಂಡ 2ನೇ ದಿನದ ಯುವ ದಸರಾ…

ಮೈ ಜುಮೆನಿಸಿದ ರವಿ ಬಸ್ರೂರು ಸಂಗೀತ ಸಂಯೋಜನೆ…

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಧ್ವನಿಯ ನವಿಲಿನ ನೃತ್ಯ..

ಮೈಸೂರು: ನಗರದ ಹೊರವಲಯ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರಾದ ಎರಡನೇ ದಿನವಾದ ಸೋಮವಾರ ರಾತ್ರಿಯ ವೇದಿಕೆಯಲ್ಲಿ ಹಾಡು-ನೃತ್ಯಗಳು ವಿಜೃಂಭಿಸಿ, ನೆರೆದಿದ್ದ ಯುವ ಸಮೂಹವನ್ನು ರಂಜಿಸಿದವು.

ಕನ್ನಡದ ಖ್ಯಾತ ಸಂಗೀತ ಸಂಯೋಜಕರಾದ ರವಿ ಬಸ್ರೂರು, ಬಾಲಿವುಡ್‌ ಗಾಯಕಿ ಧ್ವನಿ ಬಾನುಶಾಲಿ ಅವರ ಹಾಡುಗಳು ಯುವ ದಸರೆಗೆ ಕಿಚ್ಚು ಹಚ್ಚಿದವು.

ಮೊದಲಿಗೆ ʻಮುಜ್‌ ಸೇ ದೂರ್‌ ಕಹಾ ಜಾ….ಎಂದು ವೇದಿಕೆ ಮೇಲೆ ಬಂದ ಬಾಲಿವುಡ್‌ ಗಾಯಕಿ ಧ್ವನಿ ಬಾನುಶಾಲಿ ಅವರ ಧ್ವನಿ ಜನರ ಮನಗೆದ್ದಿತು. ಹಾಡಿನೊಂದಿಗೆ ಸೊಂಟ ಬಳಕಿಸುತ್ತಾ ಬಂದ ಅವರ ನವಿಲಿನ ನರ್ತನವು ಯುವ ಪಡ್ಡೆ ಹುಡುಗರ ನಿದ್ದೆ ಕೆಡಿಸಿತು.

ದಿಲ್ಬರ್ ದಿಲ್ಬರ್, ಹು ಅಂಟವಾ ಮಾವ…., ಧಮ್‌ ಮಾರೋ ಧಮ್‌… ಮೊದಲಾದ ಗೀತೆಗಳು ಬಾಲಿವುಡ್‌ ಪ್ರಿಯರ ಮನ ತಣಿಸಿದವು.

ಸಲಾಂ ರಾಕಿ ಬಾಯ್‌, ತೂಫಾನ್ ತೂಫಾನ್‌ ಎಂದು ವೇದಿಕೆಗೆ ರಗಡ್‌ ಆಗಿ ಎಂಟ್ರಿ ಕೊಟ್ಟ ಖ್ಯಾತ ಕನ್ನಡ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರುಎರಡು ಗಂಟೆ ಕಾಲ ಕನ್ನಡದ ಜನಪ್ರಿಯ ಗೀತೆಗಳ ರಸದೌತಣ ಉಣಬಡಿಸಿದರು.

ಎದೆ ಝಲ್ ಎನಿಸುವ ʻಉಗ್ರಂ ಚಿತ್ರದ ಉಗ್ರಾಂ ವಿರಾಮ್…. ಹಾಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.

ಯುವ ದಸರಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಯುವ ಸಂಭ್ರಮ ವೇದಿಕೆಯಲ್ಲಿ ಅವಕಾಶ ಸಿಗದ ವಿವಿಧ ಕಲಾತಂಡಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗತ್ತು. ಕೆ ಆರ್ ನಗರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರಿಂದ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರದ, ನ್ಯಾಯ, ಆಡಳಿತದ ಕುರಿತು ನೃತ್ಯದ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದರು.

ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನ ಕಲಾ ತಂಡವು ತುಳು ನಾಡಿನ ವಿಶೇಷ ಯಕ್ಷಗಾನ ನೃತ್ಯ, ಕೊಡಗಿನ ಡ್ಯಾನ್ಸ್, ಕಾಡಿನ ಹಾಡಿಯ ಜನರ ಕಲಾಪ್ರಕಾರ, ಹಾಗೂ ಕೊಡವ ವಿಶೇಷ ನೃತ್ಯದ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂಟಿ ಕೊಪ್ಪಲು ವಿದ್ಯಾರ್ಥಿಗಳು ನಮ್ಮ ಮೈಸೂರು ಚಾಮರಾಜನಗರ ವಿಭಾಗದ ಪ್ರಮುಖ ಕಲೆಯಾದ ಜನಪದ ಕಲೆ ಡೊಳ್ಳು ಕುಣಿತ, ತಮಟೆ ವಾದ್ಯವನ್ನು ಭಾರಿಸುತ್ತಾ ಕರಗ, ಪೂಜಾ ಕುಣಿತ, ವೀರಗಾಸೆ ಮುಂತಾದ ಜನಪದ ಕಲೆಯನ್ನು ಪ್ರದರ್ಶಿಸಿದರು.

ಮಂಡ್ಯದ ಪಿ.ಈ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಲಗಂಬ ಕ್ರೀಡೆಯನ್ನು ಪ್ರದರ್ಶಿಸಿ ನೋಡುಗರ ಮೈ ಜಮ್ ಎನುವಂತೆ ಮಾಡಿದರು.

ಮೈಸೂರಿನ ಟೆರಿಷಿಯನ್ ಕಾಲೇಜು ವಿದ್ಯಾರ್ಥಿನಿಯರ ತಂಡವು. ದೇವರ ನಾಡು ಕೇರಳದ ಪ್ರಸಿದ್ದ ನೃತ್ಯವಾದ ಮೋಹಿನಿಯಟಂ ಪ್ರದರ್ಶನವನ್ನು ನೀಡಿದರು.ಕರುಣಾಮಯಿ ಫೌಂಡೇಶನ್ ನ ವಿಶೇಷ ಮಕ್ಕಳ ಕಲಾತಂಡವು ಕರುನಾಡಿನ ವಿಶೇಷತೆಯ ಬಗ್ಗೆ ನೃತ್ಯವನ್ನು ಮಾಡಿ ತಮ್ಮ ಮುಗ್ಧ ನಡಿಗೆಯ ಮೂಲಕ ಮನ ಮನಸೆಳೆದರು. ವಾಣಿವಿಲಾಸ ಅರಸು ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ಕಂಡತಹಃ ಶ್ರೇಷ್ಠ ಆಡಳಿತಗಾರ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆ, ಆಡಳಿತವನ್ನು ತಮ್ಮ ನೃತ್ಯದ ಮೂಲಕ ತಿಳಿಸುವಲ್ಲಿ ಸಫಲರಾದರು.

ಮೈಸೂರು ವಿಶ್ವಿದ್ಯಾನಿಲಯದ ಕುವೆಂಪು ಕನ್ನಡ ಸಂಸ್ಥೆಯ ವಿದ್ಯಾರ್ಥಿಗಳು ಜನಪದ ಸೊಗಡಿನ ನೃತ್ಯದ ಮೂಲಕ ರಂಜಿಸಿದರು.

ಕಿಕ್ಕಿರಿದು ಸೇರಿದ್ದ ಯುವ ಸಮೂಹ : ಕಾರ್ಯಕ್ರಮದ ಮೊದಲ ದಿನ ಸೇರಿದಂತೆಯೇ ಯುವ ದಸರಾ ಕಾರ್ಯಕ್ರಮದ ಎರಡನೇ ದಿನವೂ ಯುವ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿತ್ತು ಕನ್ನಡ‌ ಹಾಗೂ ಬಾಲಿವುಡ್ ಗೀತೆಗಳಿಗೆ ಕುಣಿದು ಕುಪ್ಪಳಿಸಿ ಯುವ ದಸರಾದ ಸವಿಯನ್ನು ಸವಿದು ಕಣ್ತುಂಬಿಕೊಂಡರು.

Tags: