Mysore
25
overcast clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ಪೊಲೀಸ್ ವಾದ್ಯಮೇಳ: ಅರಮನೆ ಆವರಣದಲ್ಲಿ ಜಮಾಯಿಸಿದ ಸಹಸ್ರಾರು ಜನ

ಮೈಸೂರು : ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮಂಗಳವಾರ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಅರಮನೆ‌ ಆವರಣದಲ್ಲಿ ಆಯೋಜಿಸಲಾಗಿದ್ದ, ಸಮೂಹ ವಾದ್ಯಮೇಳ ವೀಕ್ಷಿಸಲು
ಸಾವಿರಾರು ಜನರ ಜನ ಸಾಗರವೇ ಹರಿದು ಬಂದಿತ್ತು.

ರಾಜ ಕಹಳೆ ಮೊಳಗಿಸುವ ಮೂಲಕ ಗೃಹ ಸಚಿವರಾದ ಜಿ ಪರಮೇಶ್ವರ ಅವರನ್ನು ಕರ್ನಾಟಕ‌ ಪೊಲೀಸ್ ಅವರು ಬರಮಾಡಿಕೊಂಡರು. ಕರ್ನಾಟಕದ ವಿವಿಧ ಜಿಲ್ಲೆಗಳ 400 ಕ್ಕಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡಗಳಿಂದ ಆಕರ್ಷಕ ರೀತಿಯಲ್ಲಿ ವಿವಿಧ ವಿನ್ಯಾಸಗಳ ಸಮೂಹ ವಾದ್ಯಮೇಳವನ್ನು ಪ್ರದರ್ಶಿಸಲಾಯಿತು.

ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ವಾದ್ಯಮೇಳಕ್ಕೆ ಜನರು ಮೂಕ ವಿಸ್ಮಿತರಾದರೆ, ಮಧ್ವಾಚಾರ್ಯರ ಕೃತಿಯಾದ ಪ್ರೇಣಯಾಮೋ ವಾಸುದೇವಂ ವಾದ್ಯಕ್ಕೆ ಜನರು ಮನಸೋತರು. ಸಂತ ತುಳಸಿದಾಸರ ಕೃತಿಯಾದ ಶ್ರೀ ರಾಮಚಂದ್ರ ಕೃಪಾಲು ಭಜಮನ ವಾದ್ಯಗಳನ್ನು ಕರ್ನಾಟಕ ವಾದ್ಯವೃಂದದವರು ಪ್ರಸ್ತುತಿ‌ ಪಡಿಸಿದರು.

ಆಂಗ್ಲ ವಾದ್ಯ ವೃಂದದವರು ಹರ್ಮನ್ ಸ್ಪಾರ್ಕ್ ಅವರ ಲೈಟ್ ಕವಾಲಿ, ಎ ಆರ್ ರೆಹಮಾನ್ ಅವರ ಯಶಸ್ವಿ ಆರು ಗೀತೆಗಳನ್ನು ಒಟ್ಟುಗೂಡಿಸಿ ಬಹು ವಾದ್ಯೋಪಕರಣಗಳನ್ನು ಬಳಸಿ ತಮ್ಮದೇ ಆದ ಶೈಲಿಯ ವಾದ್ಯಮೇಳವನ್ನು ನೆರೆದಿದ್ದಂತಹ ಜನ ಸಾಗರದ ಮುಂದೆ ಪ್ರದರ್ಶಿಸಿದರು.

ಕರ್ನಾಟಕ ವಾದ್ಯವೃಂದ ಮತ್ತು ಆಂಗ್ಲ ವಾದ್ಯವೃಂದದವರು ಡಾ.ಎಲ್ ಸುಬ್ರಹ್ಮಣ್ಯ ಅವರ ಕನ್ವರ್ಜೇಷನ್ ಎಂಬ ಸಂಯೋಜನೆಯ ಜುಗಲ್ ಬಂದಿ ನಡೆಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ್ ಎಲ್ ಜಾರಕಿಹೊಳಿ, ಸಮಾಜ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ ಸಿ‌ ಮಹದೇವಪ್ಪ, ಬೆಂಗಳೂರಿನ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಅಲೋಕ್ ಮೋಹನ್, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಎಸ್.ಶ್ರೀವತ್ಸ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಪೊಲೀಸ್ ಆಯುಕ್ತರಾದ ಸೀಮಾ‌ ಲಾಟ್ಕರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!