Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ

ಮೈಸೂರು: ದಸರಾ ಎಂಬುದು ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ. ಈ ಉತ್ಸವವು ಕೇವಲ ಮೈಸೂರಿಗಷ್ಟೇ ಸೀಮಿತವಾಗಿರದೆ ಇಡೀ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಇಂದು ಮೈಸೂರು ದಸರಾ ಅಂಗವಾಗಿ ಮೈಸೂರು ಅರಮನೆಯ ಒಳ ಆವರಣದಲ್ಲಿ ಆಯೋಜಿಸಲಾಗಿದ್ದ, ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಲಾವಿದರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಇಂದು ಮಹಿಳೆಯರಿಗಾಗಿ ಏರ್ಪಡಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿರುವುದು ಸಂತಸದ ವಿಷಯ ಎಂದರು.

ರಂಗೋಲಿ ಎಂಬುದು ತಲತಲಾಂತರಗಳಿಂದ ಬಂದ ಕಲೆ. ಹಿಂದೆ ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಈ ಕಲೆ ಇಂದು ವಿವಿಧ ರೂಪ ತಾಳಿ ಪುರುಷರು ರಂಗೋಲಿಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಸಗಣಿಯನ್ನು ಚಿಮ್ಮಿ ಅದರ ಮೇಲೆ ರಂಗೋಲಿ ಬಿಡುವಂಥದ್ದು, ನಗರಗಳಲ್ಲಿ ಮನೆಯ ಮುಂದಿನ ಸೌಂದರ್ಯವನ್ನು ಹೆಚ್ಚಿಸಲು ರಂಗೋಲಿ ಬಿಡುವ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತವೆ ಎಂದರು.

ಇಂದು ರಂಗೋಲಿಯ ವಿಶಿಷ್ಟ ರೂಪ ಹಾಗೂ ಅದರ ಮಹತ್ವವನ್ನು ತಿಳಿಸಲು ಮೈಸೂರು ದಸರಾದಂತಹ ದೊಡ್ಡ ಮಹೋತ್ಸವದಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಎಷ್ಟೋ ರಂಗೋಲಿ ಪ್ರತಿಭೆಗಳ, ಚಿತ್ರಕಲಾ ಕಲಾವಿದರ ಅನಾವರಣಗೊಳ್ಳಲಿದೆ. ಸೋಲು-ಗೆಲುವಿನ ನಿರೀಕ್ಷೆ ಬಿಟ್ಟು ಪ್ರತಿಯೊಬ್ಬ ಸ್ಪರ್ಧಿಯು ತಮ್ಮಲ್ಲಿರುವ ಕಲೆಯನ್ನು ಪ್ರಸ್ತುತ ಪಡಿಸಲು ಮುಂದಾಗಿ ಎಂದು ಶುಭ ಹಾರೈಸಿದರು.

ಮೈಸೂರಿನ ಇಬ್ಬರು ಕಲಾವಿದರು ಏಪ್ರಿಲ್ 14 ರಂದು ಇದೇ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ರಂಗೋಲಿಯಲ್ಲಿ ಅಂಬೇಡ್ಕರ್ ಚಿತ್ರವನ್ನು ಬಿಡಿಸಿದ್ದು, ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕುವೆಂಪುನಗರ ಪಾರ್ಕ್ನಲ್ಲಿ 120 ಅಡಿಯ ರಾಮಮಂದಿರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಂತಹ ಸಂದರ್ಭಗಳು ರಂಗೋಲಿಯ ಮಹತ್ವ ಹಾಗೂ ಸೌಂದರ್ಯವನ್ನು ತಿಳಿಸುತ್ತವೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 100 ಮಹಿಳೆಯರು ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಮಹಿಸಾಸುರ ರೂಪ, ಮೈಸೂರು ದಸರಾ ಅಂಬಾರಿಯನ್ನು ಹೊತ್ತಿರುವ ಆನೆಯ ಚಿತ್ರ, ಬಸವ ಮತ್ತು ಶಿವ, ಲಿಂಗ ಸಮಾನತೆಯನ್ನು ಉತ್ತೇಜಿಸೋಣ ಎಂಬ ವಿಷಯದ ಮೇಲೆ, ಮಹಿಳೆಯ ಮೇಲೆ ಆಗುತ್ತಿರುವ ಅತ್ಯಾಚಾರ ತಡೆಗಟ್ಟುವುದು ಸೇರಿದಂತೆ ಬಣ್ಣದ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದು, ಸ್ಪರ್ಧೆಯಲ್ಲಿ ಮೂರು ಬಹುಮಾನ, ಮೂರು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಅ.8ರಂದು ನೀಡಲಾಗುತ್ತದೆ.

 

Tags: