ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಸಂತತಿ ಉಳಿವಿಗಾಗಿ ಜನಜಾಗೃತಿ ಮೂಡಿಸುವ ಮೂಲಕ ವಿಶ್ವ ಗುಬ್ಬಚ್ಚಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ನಗರದ ಮಹಾರಾಜ ಮೈದಾನದ ಮುಂಭಾಗ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮಕ್ಕೆ ನಟ ಆದಿ ಲೋಕೇಶ್ ಅವರು ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗುಬ್ಬಿ ಈಗ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅಳಿವಿನ ಅಂಚಿನಲ್ಲಿದೆ. ಗುಬ್ಬಚ್ಚಿ ದಿನ ಮಾತ್ರ ಪಕ್ಷಿಗಳಿಗೆ ನೀರು ಆಹಾರ ನೀಡುವುದು ಮುಖ್ಯವಲ್ಲ. ಪ್ರತಿದಿನವೂ ಸಹ ಪಕ್ಷಿ ಸಂಕುಲವನ್ನು ಉಳಿಸಲು ತಮ್ಮ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರಿನ ಬಟ್ಟಲು ಅಳವಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರು, ಇಂದು ಕೃಷಿಗೆ ಹಲವು ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನಪ್ಪುತ್ತಿವೆ. ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿಯುತ್ತದೆ. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು. ದೇಶದಲ್ಲಿ ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ. ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದ್ದು, ಮನುಷ್ಯನಿಂದಲೇ ಗುಬ್ಬಿಗೆ ಕಂಟಕ ಎದುರಾಗಿದೆ. ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ ಎಂದರು.





