ಮೈಸೂರು: ನೀರಿಲ್ಲದೆ ಜೀವವಿಲ್ಲ ಹಾಗಾಗಿ ನಾವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಬಳಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಹೇಳಿದರು.
ನಗರದ ನಜರ್ಬಾದ್ನ ಖಾಸಗಿ ಹೋಟೆಲ್ ನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಶನಿವಾರ ವಿಶ್ವ ಜಲ ದಿನಾಚರಣೆ ಅಂಗವಾಗಿ ಹೋಟೆಲ್ಗಳಲ್ಲಿ ನೀರಿನ ಮಹತ್ವದ ಜಾಗೃತಿಯುಳ್ಳ ಕರ ಪತ್ರವನ್ನು ಅಂಟಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಸಂರಕ್ಷಿಸಬೇಕೆಂದು ಮನವಿ ಮಾಡಿದರು.
ನೀರಿನ ಮಹತ್ವ ಮೂಡಿಸಬೇಕಾದದ್ದು ಹೋಟೆಲ್ಗಳ ಹೊಣೆಗಾರಿಕೆಯೂ ಹೌದು. ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವದ ಬಗ್ಗೆ ಹೋಟೆಲ್ಗಳು ಅರಿವು ಮೂಡಿಸುವ ಹೆಜ್ಜೆ ಇಡಬೇಕಾಗಿದೆ. ಗ್ರಾಹಕರು ಏನಾದರೂ ಅಂದು ಕೊಳ್ಳಲಿ ನೀರನ್ನು ಮಿತವಾಗಿ ಬಳಸಿ ಎಂಬಂತಹ ಜಾಗೃತಿಯ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು ಎಂದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಎಸ್.ಎನ್ ರಾಜೇಶ್, ರಾಕೇಶ್ ಹಾಜರಿದ್ದರು.





