Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ: ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು: ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ-ಪಾಕ್‌ ಮಧ್ಯೆ ಕದನ ವಿರಾಮ ಘೋಷಣೆ ಆಗಿದೆ. ಮುಂದೇನಾದರೂ ಉಲ್ಲಂಘನೆ ಆದರೆ ಸುಮ್ಮನೆ ಬಿಡೋದಿಲ್ಲ ಎಂಬ ಎಚ್ಚರಿಕೆಯ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿ ಕೊಟ್ಟಿದ್ದಾರೆ. ಪಾಕಿಸ್ತಾನ ಯಾವುದೇ ಹೋರಾಟ ಮಾಡದೇ ಹುಟ್ಟಿರುವ ರಾಷ್ಟ್ರ. ನಾವು ಸಾವಿರಾರು ವರ್ಷಗಳಿಂದ ಪರಕೀಯರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ನೆಲದ ಮಹತ್ವವೇ ಹೋರಾಟದ ಮನೋಭಾವದಿಂದ ಕೂಡಿದೆ. ನಾವು ಪಾಕಿಸ್ತಾ‌ನದಂತೆ ಯಾರೋ ಕೊಟ್ಟಿರುವ ಭಿಕ್ಷೆಯಲ್ಲಿ ಬದುಕುತ್ತಿಲ್ಲ. 75 ವರ್ಷದ ಹಿಂದೆ ದೇಶ ತುಂಡಾದಾಗ ಉದಯವಾದ ಪಾಕಿಸ್ತಾನ ಉಗ್ರವಾದಕ್ಕೆ ಬೆಂಬಲ ಕೊಡುತ್ತಾ ಬಂದಿದೆ. ಹುಡುಕಿ ಹುಡುಕಿ ಹಿಂದುಗಳನ್ನು ಕೊಲ್ಲುವ ಮಟ್ಟಕ್ಕೆ ಉಗ್ರವಾದ ಬೆಳೆದಿದೆ. ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಇದಕ್ಕೆ ಕಾರಣವಾದ ಭಾರತೀಯ ಸೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇ‌ನೆ ಎಂದರು.

ಇನ್ನು ಭಾರತ-ಪಾಕಿಸ್ತಾನದ ನಡುವಿನ ಕದನದಲ್ಲಿ ಕೈ ಕಮಲ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುದ್ಧದ ಕ್ರೆಡಿಟ್ ಭಾರತೀಯ ಸೇನೆಗೆ ಸಲ್ಲಬೇಕು ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಹಾಗಾದರೆ ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು?. ಅದರಲ್ಲಿ ಸರ್ಕಾರದ ಪಾತ್ರವೇನಿದೆ? ಎಂದು ನಾವು ಸಿಎಂ ಅವರನ್ನು ಕೇಳಬೇಕಾಗುತ್ತದೆ. ಗ್ಯಾರಂಟಿ ಯೋಜನೆಯ ಶ್ರೇಯಸ್ಸು ಅಧಿಕಾರಿಗಳಿಗೆ ಸಲ್ಲಬೇಕು. ಭಾರತ-ಪಾಕಿಸ್ತಾನ ನಡುವಿನ ಕದನ ವಿಚಾರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು.
ನಾವು ಕೂಡ ಯುದ್ದದ ಯಶಸ್ಸು ಸೇನೆಗೆ ಸಲ್ಲಬೇಕು ಎಂದು ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

Tags:
error: Content is protected !!